ADVERTISEMENT

ಅಡ್ಡದಾರಿ ಹಿಡಿಸುವ ದೃಶ್ಯಮಾಧ್ಯಮ: ವಿಷಾದ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 10:35 IST
Last Updated 6 ಫೆಬ್ರುವರಿ 2012, 10:35 IST

ಹೊಳಲ್ಕೆರೆ: ದೃಶ್ಯಮಾಧ್ಯಮಗಳು ಅತಿರಂಜಿತ ಸುದ್ದಿ, ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ಜನರನ್ನು ಅಡ್ಡದಾರಿ ಹಿಡಿಸುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ವಿಷಾದಿಸಿದರು.
ಪಟ್ಟಣದ ವಾಗ್ದೇವಿ ಶಾಲೆಯಲ್ಲಿ ಗುರುವಾರ ನಡೆದ ಪೋಷಕರ ಕ್ರೀಡಾಕೂಟ ಮತ್ತು ವಿಜ್ಞಾನ ವಸ್ತುಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೃಶ್ಯಮಾಧ್ಯಮಗಳು ಮಕ್ಕಳನ್ನು ಆಕರ್ಷಿಸುತ್ತಿವೆ. ಶಾಲಾ ಮಕ್ಕಳು ದೈನಿಕ ಧಾರಾವಾಹಿಗಳನ್ನು ನೋಡುತ್ತಿದ್ದು, ಅಧ್ಯಯನಕ್ಕೆ ತೊಂದರೆಯಾಗುತ್ತಿದೆ. ಭವಿಷ್ಯ, ಮಾಟ, ಮಂತ್ರ, ಭೂತ, ಪ್ರೇತದಂತಹ ಅತಿಮಾನುಷ ಕಾರ್ಯಕ್ರಮಗಳನ್ನು ವೈಭವೀಕರಿಸಿ ಪ್ರಸಾರ ಮಾಡುವ ಮೂಲಕ ಜನರನ್ನು ಮೂಢರನ್ನಾಗಿಸುತ್ತಿವೆ. ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳುವುದೇ ಅವರ ಮುಖ್ಯ ಗುರಿಯಾಗಿದ್ದು, ಸಮಾಜದ ಮೇಲೆ ಆಗುವ ದುಷ್ಪರಿಣಾಮದ ಬಗ್ಗೆ ಚಿಂತಿಸುತ್ತಿಲ್ಲ ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಪಿ. ಸಿದ್ದಲಿಂಗಸ್ವಾಮಿ ಮಾತನಾಡಿ, ಕೇವಲ 24 ಮಕ್ಕಳಿಂದ ಆರಂಭವಾದ ನಮ್ಮ ಶಾಲೆಯಲ್ಲಿ ಈಗ 850 ವಿದ್ಯಾರ್ಥಿಗಳಿದ್ದಾರೆ. ಕ್ರೀಡೆ, ಸಂಗೀತ, ನೃತ್ಯ ಮತ್ತಿತರ ಸೃಜನಶೀಲ ಚಟುವಟಿಕೆಗಳನ್ನು ನಡೆಸುವ ಮೂಲಕ ಮಕ್ಕಳ ಸಮಗ್ರ ವ್ಯಕ್ತಿತ್ವದ ವಿಕಸನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಪ.ಪಂ. ಸದಸ್ಯ ಕೆ.ಎಂ. ಲಿಂಗರಾಜು ಮಾತನಾಡಿ, ಶಾಲಾ ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಗುರು- ಹಿರಿಯರನ್ನು ಗೌರವಿಸುವುದು, ಸತ್ಯ, ನ್ಯಾಯ, ನಿಷ್ಠೆ ಮತ್ತಿತರ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಶಿಕ್ಷಕರು ಮತ್ತು ಪೋಷಕರು ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು. ವಿಜ್ಞಾನ ವಸ್ತುಪ್ರದರ್ಶನ ಮತ್ತು ಪೋಷಕರಿಗೆ ಕ್ರೀಡಾಕೂಟ ಏರ್ಪಡಿಸಲಾಗಿತ್ತು.

ಡಾ.ಎನ್.ಬಿ. ಸಜ್ಜನ್, ಪ್ರಗತಿ ಗ್ರಾಮೀಣ ಬ್ಯಾಂಕ್‌ನ ಚಿತ್ರದುರ್ಗ ಶಾಖೆಯ ಹಿರಿಯ ವ್ಯವಸ್ಥಾಪಕ ಎಚ್.ವೈ. ಕಾಂತರಾಜ್, ಪ್ರಾದೇಶಿಕ ವ್ಯವಸ್ಥಾಪಕ ಪಿ.ಸಿ. ಗಂಗಾಧರಪ್ಪ, ಪ.ಪಂ. ಸದಸ್ಯ ಕೆ.ಸಿ. ರಮೇಶ್, ರೋಟರಿ ಅಧ್ಯಕ್ಷ ಮಹಾಂತೇಶ್, ಸಿಪಿಐ ಕೆ.ವಿ. ಶ್ರೀಧರ್, ಸಮನ್ವಯಾಧಿಕಾರಿ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
ಮುಖ್ಯಶಿಕ್ಷಕ ದಿವಾಕರ್ ಸ್ವಾಗತಿಸಿದರು. ಪ್ರಾಂಶುಪಾಲ ರವಿ ಮತ್ತು ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.