ಹಿರಿಯೂರು: ಸರ್ವಪಲ್ಲಿ ಡಾ.ಎಸ್.ರಾಧಾಕೃಷ್ಣನ್ ಅವರು ಹುಟ್ಟುಹಬ್ಬವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲು ತೀರ್ಮಾನಿಸಿರುವುದರ ಹಿಂದೆ ದೇಶವನ್ನು ಸದೃಢಗೊಳಿಸುವ ಮಹದಾಸೆ ಇತ್ತು ಎಂದು ಇನ್ನರ್ವ್ಹೀಲ್ ಕ್ಲಬ್ ಅಧ್ಯಕ್ಷೆ ಶೈಲಜಾ ಗೋಪಿನಾಥ್ ಹೇಳಿದರು.
ನಗರದ ರಾಷ್ಟ್ರೀಯ ಅಕಾಡೆಮಿ ಶಾಲೆಯಲ್ಲಿ ಬುಧವಾರ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗೆ ಏರ್ಪಡಿಸಿದ್ದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಒಬ್ಬ ವಿಜ್ಞಾನಿ, ವ್ಯಾಪಾರಿ, ಕ್ರೀಡಾಪಟು, ವೈದ್ಯ, ಎಂಜಿನಿಯರ್ ಮೊದಲಾದ ಎಲ್ಲರೂ ಶಿಕ್ಷಕರಿಂದ ಕಲಿತವರೇ ಆಗಿದ್ದಾರೆ. ಬದುಕಿನ ದಾರಿ ತೋರಿಸಿದ ಗುರುಗಳನ್ನು ಸ್ಮರಿಸುವ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.
`ವರ್ಷವಿಡೀ ವಿದ್ಯಾರ್ಥಿಗಳಿಗೆ ಕಲಿಸುವ ಶಿಕ್ಷಕರಿಗೆ ನಾವೆಲ್ಲ ಸೇರಿ ಇದೊಂದು ದಿನ ಖುಷಿ ಕೊಡೋಣ ಎಂಬ ಕಾರಣಕ್ಕೆ, ಶಿಕ್ಷಕರಲ್ಲಿರುವ ಪ್ರತಿಭೆಯನ್ನು ಮಕ್ಕಳು ನೋಡಲಿ ಎಂಬ ಉದ್ದೇಶದಿಂದ ಈ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ' ಎಂದು ಶೈಲಜಾ ಹೇಳಿದರು.
ಸುಚಿತ್ರಾ ಅಮರನಾಥ್, ಪದ್ಮಜಾ ಮಹಾಬಲೇಶ್ವರ ಶೆಟ್ಟಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.