ADVERTISEMENT

ನೀತಿ ಸಂಹಿತೆ ಉಲ್ಲಂಘನೆ

ಅಂಬೇಡ್ಕರ್ ಜಯಂತಿ ಆಚರಣೆ ನೆಪದಲ್ಲಿ ಬೆಂಬಲಿಗರ ಸಭೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 6:01 IST
Last Updated 15 ಏಪ್ರಿಲ್ 2013, 6:01 IST

ಚಳ್ಳಕೆರೆ: ಪಟ್ಟಣದ ಹೊರವಲಯದಲ್ಲಿ ಇರುವ ನರಹರಿ ನಗರದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಸಿ. ಸಂಜೀವಮೂರ್ತಿ ಎಂಬುವರು `ಸ್ನೇಹ ಬಳಗ' ಎಂಬ ಸಾಂಸ್ಕೃತಿಕ ವೇದಿಕೆ ವತಿಯಿಂದ ಭಾನುವಾರ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಅಚರಣೆಯ ನೆಪದಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಬೆಂಬಲಿಗರ ಸಭೆ ನಡೆಸಲಾಗುತ್ತಿದೆ ಎಂದು ತಹಶೀಲ್ದಾರ್ ವಿಜಯರಾಜು ನೇತೃತ್ವದಲ್ಲಿ ಪೊಲೀಸರು ಸಭೆ ನಡೆಯುವ ಸ್ಥಳಕ್ಕೆ ಧಾವಿಸಿ ಶಾಮಿಯಾನ, ಕುರ್ಚಿ ಹಾಗೂ ಸಮಾರಂಭಕ್ಕೆ ಬರುವ ಜನರಿಗಾಗಿ ತಯಾರಿಸಿದ್ದ ಸಿಹಿ ತಿನಿಸುಗಳನ್ನು ಜಪ್ತಿ ಮಾಡಿದ ಪ್ರಕರಣ ಭಾನುವಾರ ನಡೆದಿದೆ.

ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸಾರ್ವಜನಿಕವಾಗಿ ಯಾವುದೇ ಸಭೆ, ಸಮಾರಂಭ ಮಾಡುವಂತಿಲ್ಲ ಎಂಬ ಸ್ಪಷ್ಟ ನಿರ್ದೇಶನ ಇದ್ದರೂ ಸಮಾನ ಮನಸ್ಕರ ಸಭೆ ಎಂದು ಬೆಂಬಲಿಗರ ಸಭೆ ನಡೆಸಿರುವುದು ನೀತಿ ಸಂಹಿತೆ ಉಲ್ಲಂಘನೆ ಆಗಿದೆ. ಆದ್ದರಿಂದ, ಸಮಾರಂಭಕ್ಕೆ ಬಳಸಲಾಗಿರುವ ವಸ್ತು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏ. 12ರಂದು ಸ್ನೇಹ ಬಳಗದ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆಗೆ ಅನುಮತಿ ನೀಡಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಆದರೆ, ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಅನುಮತಿ ನೀಡಲಾಗಿರಲಿಲ್ಲ. ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಹಶೀಲ್ದಾರ್ ವಿಜಯರಾಜು ತಿಳಿಸಿದ್ದಾರೆ.

ತಹಶೀಲ್ದಾರ್ ದೂರಿನ ಮೇರೆಗೆ ಬಿ.ಸಿ. ಸಂಜೀವಮೂರ್ತಿ ಹಾಗೂ ಇತರರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ವೃತ್ತ ನಿರೀಕ್ಷಕ ಮಂಜುನಾಥ್ ತಳವಾರ ತಿಳಿಸಿದ್ದಾರೆ.

ಬೆಂಬಲಿಗರ ಸಭೆ ಅಲ್ಲ: ಸಂಜೀವಮೂರ್ತಿ
ಪ್ರತೀ ವರ್ಷದಂತೆ ಈ ಬಾರಿಯೂ ಸಮಾನ ಮನಸ್ಕರ ಜತೆ ಸೇರಿಕೊಂಡು ಅಂಬೇಡ್ಕರ್ ಅವರ ಜಯಂತಿ ಆಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದು ಯಾವುದೇ ರೀತಿಯ ರಾಜಕೀಯ ಬೆಂಬಲಿಗರ ಸಭೆ ಅಲ್ಲ.  ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರೂ ಈಚೆಗೆ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ದುರುದ್ದೇಶಪೂರ್ವಕವಾಗಿ ಕೆಲವರು ನಮ್ಮ ಕಾರ್ಯಕ್ರಮಕ್ಕೆ ಅಡ್ಡಿಯುಂಟು ಮಾಡಲು ಈ ರೀತಿ ತಂತ್ರ ಹೆಣೆದಿದ್ದಾರೆ ಎಂದು ಸಮಾರಂಭದ ಆಯೋಜಕ ಬಿ.ಸಿ. ಸಂಜೀವಮೂರ್ತಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.