ಮೊಳಕಾಲ್ಮುರು: ರಾಜ್ಯದ ಗಮನ ಸೆಳೆದಿರುವ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮುಗಿದ ನಂತರವೂ ಚುನಾವಣಾ ಕಾವು ಕಡಿಮೆಯಾಗಿಲ್ಲ. ಜನರು ಹೋಟೆಲ್, ಅಂಗಡಿ ಮುಂಗಟ್ಟುಗಳ ಬಳಿ ಕುಳಿತು ಯಾರು ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿ ನಿರತರಾಗಿದ್ದು ಕಂಡುಬಂದಿತು.
ಬಿಜೆಪಿ ಮುಖಂಡರು ಮಾತನಾಡಿ, ‘ದೇವಸಮುದ್ರ, ಮೊಳಕಾಲ್ಮುರು ಕಸಬಾ ಹೋಬಳಿಗಳಲ್ಲಿ ಪಕ್ಷಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಕನಿಷ್ಠ 25 ಸಾವಿರ ಮತಗಳ ಅಂತರದಲ್ಲಿ ಶ್ರೀರಾಮುಲು ಗೆಲುವು ನಿಶ್ವಿತ ’ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಡಾ. ಬಿ. ಯೋಗೇಶ್ಬಾಬು ಮಾತನಾಡಿ, ‘ಪಕ್ಷದಿಂದ ದೊರೆಯಬೇಕಾಗಿದ್ದ ಸಹಾಯ ಕೊನೆ ಕ್ಷಣದಲ್ಲಿ ಕೈತಪ್ಪಿತು. ಯಾವುದೇ ಬೇರೆ ಮಾರ್ಗ ಇಲ್ಲದಂತಾಯಿತು. ಇದರ ಲಾಭ ಪಡೆದು ಕೆಲವರು ಸುಳ್ಳು ಸುದ್ದಿ ಹರಡಿಸಲು ಕಾರಣವಾಯಿತು. ಇದನ್ನು ಮುಖಂಡರಿಗೆ ಮನದಟ್ಟು ಮಾಡಿಕೊಟ್ಟ ನಂತರ ಪಕ್ಷದ ಪರ ಕೆಲಸ ಮಾಡಿದ್ದಾರೆ. ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಮತ ಎಣಿಕೆ ವರೆಗೂ ಸೋಲು–ಗೆಲುವು ಬಗ್ಗೆ ಮಾತನಾಡುವುದಿಲ್ಲ. ಕಾರ್ಯಕರ್ತರ ಬಳಿ ಇರುತ್ತೇನೆ. ಕ್ಷೇತ್ರ ಪ್ರವಾಸ ಮಾಡುತ್ತಿದ್ದೇನೆ’ ಎಂದರು.
ಜೆಡಿಎಸ್ ಅಭ್ಯರ್ಥಿ ಪಟೇಲ್, ಜಿ.ಎಂ. ತಿಪ್ಪೇಸ್ವಾಮಿ ಮಾತನಾಡಿ, ‘ಪಕ್ಷಕ್ಕೆ ಎಲ್ಲಾ ಹೋಬಳಿಯಲ್ಲೂ ಉತ್ತಮ ಮತ ಬಿದ್ದಿವೆ. ಪಕ್ಷೇತರ ಅಭ್ಯರ್ಥಿ ಎಸ್. ತಿಪ್ಪೇಸ್ವಾಮಿ ಎಷ್ಟರ ಮಟ್ಟಿಗೆ ಬಿಜೆಪಿ ಮತಗಳನ್ನು ಕೀಳುತ್ತಾರೋ ಅಷ್ಟೂ ನಮಗೆ ಅನುಕೂಲವಾಗುತ್ತದೆ. ಮುಸ್ಲಿಂ ಮತಗಳು ನಮಗೆ ಹೆಚ್ಚಾಗಿ ಬಿದ್ದಿದೆ. ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ’ ಎಂದು ಹೇಳಿದರು.
ಪಕ್ಷೇತರ ಅಭ್ಯರ್ಥಿ, ಎಸ್. ತಿಪ್ಪೇಸ್ವಾಮಿ ಮಾತನಾಡಿ, ‘ಕಾಂಗ್ರೆಸ್ ಅಭ್ಯರ್ಥಿ ಅಂತಿಮ ನಡೆ ಹಾಗೂ ಶ್ರೀರಾಮುಲುಗೆ ಸೆಡ್ಡು ಹೊಡೆದಿದ್ದು ಅನುಕೂಲ ಮಾಡಿಕೊಟ್ಟಿದೆ. ಗೆಲ್ಲುವ ಆಸೆ ದುಪ್ಪಟ್ಟು ಮಾಡಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.