ADVERTISEMENT

ಮಹಿಳಾ ಸಾಧನೆಗೆ ಪ್ರೋತ್ಸಾಹ ಅಗತ್ಯ: ತಾರಾ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 6:00 IST
Last Updated 20 ಮಾರ್ಚ್ 2012, 6:00 IST

ಹೊಳಲ್ಕೆರೆ: ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಲು ಅವರಿಗೆ ಸೂಕ್ತ ಪ್ರೋತ್ಸಾಹ ನೀಡುವ ಅಗತ್ಯ ಇದೆ ಎಂದು ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಹೇಳಿದರು.

ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಸೋಮವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮಹಿಳೆಗೆ ಕರ್ತವ್ಯ ಮತ್ತು ಕಾನೂನಿನ ಅರಿವು ಇದ್ದರೆ ಅವಳು ಪರಿಪೂರ್ಣ ಜೀವನ ನಡೆಸುತ್ತಾಳೆ. ಸ್ಪಷ್ಟ ಗುರಿ ಮತ್ತು ಛಲದಿಂದ ಮುನ್ನುಗ್ಗಿದರೆ ಎಲ್ಲಾ ಸಾಧನೆಗಳನ್ನೂ ಮಾಡಬಹುದು. ನನಗೂ ಚಲನಚಿತ್ರ ಕ್ಷೇತ್ರಕ್ಕೆ ಹೋಗಲು ಮೊದಲು ಮನೆಯವರ ಪ್ರೋತ್ಸಾಹ ಇರಲಿಲ್ಲ. ಆದರೂ ನನ್ನ ಪ್ರತಿಭೆ ಮತ್ತು ಗುರಿಯಿಂದ ಇಷ್ಟೆಲ್ಲಾ ಸಾಧನೆ ಮಾಡಿದೆ ಎಂದರು.

ಸಮಾಜದಲ್ಲಿ ಮಹಿಳೆ ಪುರುಷನಿಗಿಂತ ಪ್ರಮುಖ ಪಾತ್ರ ವಹಿಸುತ್ತಾಳೆ. ಮಗಳು, ಪತ್ನಿ, ತಾಯಿಯಾಗಿ ಅವಳು ಪರುಷನ ಸೇವೆ ಮಾಡುತ್ತಾಳೆ. ಆದರೆ, ಇಂದಿಗೂ ಮಹಿಳೆ ಶೋಷಣೆ, ದೌರ್ಜನ್ಯಗಳಿಗೆ ಒಳಗಾಗುತ್ತಿರುವುದು ವಿಷಾದಕರ. ಹೆಣ್ಣು ಕಣ್ಣೀರು ಹಾಕಿದರೆ ಸಮಾಜಕ್ಕೆ ಒಳ್ಳೆಯದಾಗುವುದಿಲ್ಲ.
 
ಒಂದು ಕುಟುಂಬದ ಸಂಸ್ಕಾರವನ್ನು ಆ ಮನೆಯ ಯಜಮಾನಿಯ ವ್ಯಕ್ತಿತ್ವದಿಂದ ಗುರುತಿಸಬಹುದು. ಒಂದೆಡೆ ಇಷ್ಟು ಮಹಿಳೆಯರನ್ನು ನೋಡಿದ್ದು ಇದೇ ಮೊದಲು. ನಾನು ಚಲನಚಿತ್ರ ಅಕಾಡೆಮಿಯ ಅಧ್ಯಕ್ಷೆ ಆದ ಮೇಲೆ ಪ್ರಥಮ ಬಾರಿಗೆ ಇಲ್ಲಿನ ತಾಯಂದಿರ ಆಶೀರ್ವಾದ ಪಡೆಯುತ್ತಿರುವುದು ಪುಣ್ಯ ಎಂದು ಭಾವುಕರಾಗಿ ನುಡಿದರು.

ಶಾಸಕ ಎಂ. ಚಂದ್ರಪ್ಪ ಮಾತನಾಡಿ, ಮಹಿಳೆಯರಿಗಾಗಿ ಒಂದು ಒಳ್ಳೆಯ ಕಾರ್ಯಕ್ರಮ ನಡೆಸಬೇಕು ಎಂದು ಬಹಳ ದಿನಗಳಿಂದ ಆಸೆ ಇತ್ತು. ಅದು ಇಂದು ಈಡೇರಿದೆ. ಕಳೆದ ನಾಲ್ಕು ವರ್ಷಗಳಲ್ಲಿ ್ಙ 500 ಕೋಟಿ ಅನುದಾನ ತಂದಿದ್ದು ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಪಟ್ಟಣದಲ್ಲಿ ್ಙ 1 ಕೋಟಿ ವೆಚ್ಚದಲ್ಲಿ ಮಹಿಳಾ ಭವನ ನಿರ್ಮಿಸಲಾಗುವುದು. ಜನರ ಪ್ರೋತ್ಸಾಹವಿದ್ದರೆ ಇನ್ನೂ ಹೆಚ್ಚಿನ ಕೆಲಸ ಮಾಡುತ್ತೇನೆ ಎಂದರು.

ಮಾಲೂರು ಶಾಸಕ ಹಾಗೂ ನೀರು ಸರಬರಾಜು ಮತ್ತು ಜಲಮಂಡಳಿ ಅಧ್ಯಕ್ಷ ಕೃಷ್ಣಯ್ಯ ಶೆಟ್ಟಿ ಮಾತನಾಡಿ, ಶಾಸಕ ಎಂ. ಚಂದ್ರಪ್ಪ ಕೇಂದ್ರ ಸರ್ಕಾರದಿಂದ ಚಿತ್ರದುರ್ಗ ಜಿಲ್ಲೆಗೆ ಸಮಗ್ರ ಕುಡಿಯುವ ನೀರಿನ ಯೋಜನೆಗಾಗಿ ್ಙ 1,200 ಕೋಟಿ ಬಿಡುಗಡೆ ಮಾಡಿಸಿದ್ದಾರೆ. ಇದರಿಂದ ಇಡೀ ಜಿಲ್ಲೆಯ ಪ್ರತಿ ಹಳ್ಳಿಗೂ ಕುಡಿಯಲು ನದಿ ನೀರು ದೊರೆಯಲಿದ್ದು, ಅವರನ್ನು `ಜಿಲ್ಲೆಯ ಭಗೀರಥ~ ಎಂದರೂ ತಪ್ಪಾಗದು. ಇಷ್ಟು ಸಂಖ್ಯೆಯ ಮಹಿಳೆಯರನ್ನು ಸಮಾವೇಶ ಒಂದರಲ್ಲಿ ನೋಡುತ್ತಿರುವುದು ಇದೇ ಮೊದಲು ಎಂದರು.
ತಹಶೀಲ್ದಾರ್ ಸರೋಜಾ, ಚಿತ್ರನಟಿ ತಾರಾ, ಕೆ.ಎಲ್. ಪದ್ಮಿನಿ, ರಮಾ ನಾಗರಾಜ್, ಕುಮುದಾ ನಾಯಕ್ ಅವರನ್ನು ಸನ್ಮಾನಿಸಲಾಯಿತು.  ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಯಿತು.

ಚಂದ್ರಕಲಾ ಚಂದ್ರಪ್ಪ, ಚಿತ್ರ ನಿರ್ಮಾಪಕ ರೆಹಮಾನ್, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಗೀತಾ, ಪಿ.ಆರ್. ಶಿವಕುಮಾರ್, ಕೆ.ಸಿ. ರಮೇಶ್, ತಾ.ಪಂ. ಸದಸ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.