ಚಿತ್ರದುರ್ಗ: ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಅಗತ್ಯಕ್ಕೆ ತಕ್ಕಂತೆ ಶುಲ್ಕ ಭರಿಸಿಕೊಳ್ಳಬಹುದು ಎಂಬ ಪ್ರೊ.ವೆಂಕಟರಾಮಯ್ಯ ಏಕಸದಸ್ಯ ಸಮಿತಿಯ ಶಿಫಾರಸನ್ನು ಜಾರಿ ಮಾಡುತ್ತಿರುವ ಸರ್ಕಾರದ ನಿರ್ಧಾರವನ್ನು ಎಐಡಿಎಸ್ಒ ಖಂಡಿಸಿದೆ.
ಸರ್ಕಾರ ನಿಗದಿಗೊಳಿಸಿದ ಬೋಧನಾ ಶುಲ್ಕ ಹೊರತಾಗಿಯೂ, ಖಾಸಗಿ ಎಂಜನಿಯರಿಂಗ್ ಕಾಲೇಜುಗಳು ತಮ್ಮ ಅಗತ್ಯಕ್ಕನುಗುಣವಾಗಿ ದುಬಾರಿ ಶುಲ್ಕ ವಸೂಲಿ ಮಾಡಲು ಒಪ್ಪಿಗೆ ನೀಡಿರುವ ಸರ್ಕಾರ, ಖಾಸಗಿ ಮ್ಯೋನೇಜ್ಮೆಂಟ್ಗಳ ಏಜೆಂಟ್ನಂತೆ ವರ್ತಿಸುತ್ತಾ, ಡೊನೇಷನ್-ಕ್ಯಾಪಿಟೇಷನ್ ಶುಲ್ಕವನ್ನು ಕಾನೂನಾತ್ಮಕಗೊಳಿಸಿದೆ ಎಂದು ಎಐಡಿಎಸ್ಓ ಅಭಿಪ್ರಾಯಪಟ್ಟಿದೆ.
ಕೂಡಲೇ ವೆಂಕಟರಾಮಯ್ಯ ಸಮಿತಿಯ ಶಿಫಾರಸನ್ನು ತಿರಸ್ಕರಿಸಿ, ಬೋಧನಾ ಶುಲ್ಕ ಹೊರತಾಗಿ ಹೆಚ್ಚುವರಿ ಶುಲ್ಕಗಳನ್ನು ಭರಿಸಿಕೊಳ್ಳುವ ಖಾಸಗಿ ಎಂಜನಿಯರಿಂಗ್ ಕಾಲೇಜುಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಐಡಿಎಸ್ಒ ಒತ್ತಾಯಿಸಿದೆ.
ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಬದಿಗೊತ್ತಿ ಖಾಸಗಿ ಮ್ಯೋನೇಜ್ಮೆಂಟ್ ಲಾಬಿಗಳಿಗೆ ಸಂಪೂರ್ಣವಾಗಿ ಸರ್ಕಾರ ಮಣಿದಿರುವುದು ಅತ್ಯಂತ ನಾಚಿಕೆಗೇಡಿನ ವಿಷಯವಾಗಿದೆ.
ವೃತ್ತಿ ಶಿಕ್ಷಣದ ವ್ಯಾಪಾರೀಕರಣಕ್ಕೆ ಕುಮ್ಮಕ್ಕು ನೀಡುವ ಸರ್ಕಾರದ ಈ ನೀತಿಯನ್ನು ವಿರೋಧಿಸಲು ರಾಜ್ಯದ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮುಂದಾಗಬೇಕು. ಎಲ್ಲರೂ ಈ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಸಂಘಟನೆ ಪ್ರಕಟಣೆಯಲ್ಲಿ ಮನವಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.