ಮೊಳಕಾಲ್ಮುರು: ತಾಲ್ಲೂಕಿನ ಪ್ರಮುಖ ರಥೋತ್ಸವಗಳಲ್ಲಿ ಒಂದಾದ ಕೊಂಡ್ಲಹಳ್ಳಿಯ ಆಂಜನೇಯ ಸ್ವಾಮಿ ರಥೋತ್ಸವ ಶುಕ್ರವಾರ ಸಂಜೆ ವೈಭವದಿಂದ ನಡೆಯಿತು.
ಪ್ರತಿವರ್ಷ ವಿಕೃತನಾಮ ಸಂವತ್ಸರ ಮಾಘಶುದ್ಧ ಹುಣ್ಣಿಮೆ ದಿನದಂದು (ಭಾರತ ಹುಣ್ಣಿಮೆ) ದಿನದ ಮಾಘ ನಕ್ಷತ್ರದಲ್ಲಿ ನಡೆದುಕೊಂಡು ಬರುತ್ತಿರುವ ಈ ರಥೋತ್ಸವ ಅಂಗವಾಗಿ ಗುರುವಾರ ಸಂಜೆ ಆಂಜನೇಯ ಸ್ವಾಮಿಗೆ ಗಂಗಾಪೂಜೆ ಕಾರ್ಯ ನೆರವೇರಿಸಲಾಯಿತು. ನಂತರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಶುಕ್ರವಾರ ಬೆಳಿಗ್ಗೆ ನವಗ್ರಹ ಪೂಜೆ, ದೇವಸ್ಥಾನ ಮುಂಭಾಗದಲ್ಲಿ ಬಲಿ ಅನ್ನ ಅರ್ಪಣೆ, ಹೋಮ ಸುಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆದವು. ನಂತರ 10 ಗಂಟೆಯಿಂದ ರಥದ ಮುಂಭಾಗದಲ್ಲಿ ವಿಶೇಷ ಹೋಮ ಮತ್ತು ವಿವಿಧ ಧಾರ್ಮಿಕ ವಿಧಿ- ವಿಧಾನಗಳು ನಡೆದವು. ಮಧ್ಯಾಹ್ನ 3ಕ್ಕೆ ರಥೋತ್ಸವ ಆರಂಭವಾಯಿತು. ಹನುಮಂತನಹಳ್ಳಿ ರಸ್ತೆವರೆಗೆ ಸಾಗಿ ರಥ ವಾಪಸ್ ಕರೆತರಲಾಯಿತು.ನಂದಿಕೋಲು ಕುಣಿತ, ಡೊಳ್ಳು ಕುಣಿತ, ಕೋಲಾಟ, ರಥಕ್ಕೆ ವಿಶೇಷ ಅಲಂಕಾರ ಮತ್ತು ವಿವಿಧ ಹೂವಿನ ಹಾರಗಳ ಅಲಂಕಾರ ನೋಡುಗರ ಗಮನ ಸೆಳೆದವು. ಭಕ್ತರು ತೆಂಗಿನಕಾಯಿ, ಬಾಳೆಹಣ್ಣು, ಸೂರು ಬೆಲ್ಲ, ಮಂಡಕ್ಕಿ, ಮೆಣಸು ಸಮರ್ಪಿಸಿದರು.
ಗ್ರಾಮದ ತಿಮ್ಮಪ್ಪ ದೇವಸ್ಥಾನ ಆವರಣದಲ್ಲಿ ಸಂಜೆ ಚಿತ್ರದುರ್ಗದ ‘ಜಮುರಾ’ ಸುತ್ತಾಟ ಹಾಗೂ ಕಸಾಪ ತಾಲ್ಲೂಕು ಘಟಕ ವತಿಯಿಂದ ಮಹಾದೇವ್ ಹಡಪದ ನಿರ್ದೇಶನದ ‘ಕಾಯಕಯೋಗಿ ಸಿದ್ಧರಾಮ’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಶನಿವಾರ ಸಂಜೆ ‘ಜಮುರಾ’ ಸುತ್ತಾಟದ ಕಲ್ಲಪ್ಪ ಪೂಜಾರ್ ನಿರ್ದೇಶನದ ‘ಬಯಲುಸೀಮೆ ಕಟ್ಟೆ ಪುರಾಣ’ ನಾಟಕ ಪ್ರದರ್ಶನ ನಡೆಯಲಿದೆ. ಶನಿವಾರ ಮಧ್ಯಾಹ್ನ ಸ್ವಾಮಿಯ ಹೂವಿನ ಪಲ್ಲಕ್ಕಿ ಉತ್ಸವ ಮತ್ತು ಸಂಜೆ ದೇವರನ್ನು ಗುಡಿ ದುಂಬಿಸುವ ಕಾರ್ಯ ನಡೆಯುವ ಮೂಲಕ ಜಾತ್ರೆಗೆ ತೆರೆಬೀಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.