ADVERTISEMENT

ವೈಭವದ ತಿಪ್ಪೇರುದ್ರಸ್ವಾಮಿ ದೊಡ್ಡ ಕಾರ್ತೀಕ

ನಾಯಕನಹಟ್ಟಿ: ರಥೋತ್ಸವಕ್ಕೆ ಮೆರುಗು ನೀಡಿದ ಕಲಾ ಮೇಳಗಳು

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 10:37 IST
Last Updated 22 ಡಿಸೆಂಬರ್ 2012, 10:37 IST

ನಾಯಕನಹಟ್ಟಿ: ಇಲ್ಲಿನ ಶ್ರೀ ಗುರುತಿಪ್ಪೇರುದ್ರ ಸ್ವಾಮಿ ದೊಡ್ಡ ಕಾರ್ತೀಕೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.

ಮಧ್ಯಾಹ್ನ 3ಕ್ಕೆ ಒಳಮಠದ ಮುಂಭಾಗದಲ್ಲಿ ವಿವಿಧ ಬಣ್ಣಗಳಿಂದ ಕೂಡಿದ ಪಟಗಳು ಹಾಗೂ ಬೃಹತ್ ಹೂವಿನ ಹಾರಗಳಿಂದ ಅಲಂಕೃತ ರಥದಲ್ಲಿ ತಿಪ್ಪೇರುದ್ರಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ಕರಡಿ ವಾದ್ಯ ನಂದೀಧ್ವಜ ಕುಣಿತ, ಮುಂತಾದ ಜಾನಪದ ವಾದ್ಯಗಳೊಂದಿಗೆ ರಥವನ್ನು ಒಳಮಠದ ಬಲಭಾಗದಿಂದ ಎಳೆಯಲಾಯಿತು.

ದಾರಿಯುದ್ದಕ್ಕೂ ಮಹಿಳೆಯರು, ಮಕ್ಕಳು ರಥಕ್ಕೆ ಹಣ್ಣುಕಾಯಿಕೊಟ್ಟು ಭಕ್ತಿ ಸಮರ್ಪಿಸಿದರು. ರಥೋತ್ಸಕ್ಕೆ ಶುಭದ ಸಂಕೇತವಾದ ಬಸವನನ್ನು (ದೇವರ ಎತ್ತು) ಅಲಂಕರಿಸಿ ತೇರಿನ ಮುಂಭಾಗದಲ್ಲಿ ಕರೆತರಲಾಗುತ್ತಿತ್ತು. ಭಕ್ತರು ಚೂರು ಬೆಲ್ಲ ಮೆಣಸು, ಬಾಳೆಹಣ್ಣುಗಳನ್ನು ರಥಕ್ಕೆ ತೂರಿ ಹರಕೆ ತೀರಿಸಿಕೊಳ್ಳುತ್ತಿದ್ದರು.
ಆಂಜನೇಯ ದೇವಸ್ಥಾನದ ಮುಂಭಾಗದಿಂದ ಮತ್ತೆ ಒಳಮಠಕ್ಕೆ ರಥವನ್ನು ಎಳೆದು ಕಾರ್ತೀಕೋತ್ಸವಕ್ಕೆ ತೆರೆಎಳೆಯಲಾಯಿತು.

ರಥೋತ್ಸವದಲ್ಲಿ ಕರಡಿ ಮಜಲು, ಕೀಲು ಕುದುರೆ ಕುಣಿತ, ಜಾನಪ ವೇಷ ಭೂಷಣಗಳು, ಜಾನಪದ ವಾದ್ಯಗಳು, ನಂದೀಧ್ವಜ ಭಕ್ತರನ್ನು ಆಕರ್ಷಿಸಿದವು.

ವಿಶೇಷತೆ
ಕಳೆದ ವಾರ ಜರುಗಿದ ಚಿಕ್ಕ ಕಾರ್ತೀಕೋತ್ಸವವನ್ನು ನಾಯಕನಹಟ್ಟಿ ಭಕ್ತರು ಆಚರಿಸಿದರೆ, ದೊಡ್ಡ ಕಾರ್ತೀಕೋತ್ಸವವನ್ನು ದೂರದೂರುಗಳಿಂದ, ಹೋಬಳಿಯ ವಿವಿಧ ಗ್ರಾಮಗಳಿಂದ ಬಂದಂತಹ ಸಾವಿರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.

ರಥೋತ್ಸವದ  ಜರುಗಿದ ನಂತರ ತವರು ಮನೆಗೆ ಬಂದಂತಹ ಹೆಣ್ಣು ಮಕ್ಕಳಿಗೆ ಬಳೆ ಕೊಡಿಸುವಂತಹ ಸಂಪ್ರದಾಯವಿರುವುದರಿಂದ ಮಸೀದಿ ಬಳಿ ಬಳೆ ವ್ಯಾಪಾರ, ಮಕ್ಕಳ ಆಟಿಕೆಗಳ ವ್ಯಾಪಾರ ಜೋರಾಗಿ ಸಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.