ಹೊಸದುರ್ಗ: ಲಘು ಭೂಕಂಪನ ಸಂಭವಿಸಿದ್ದ ತಾಲ್ಲೂಕಿನ ದೊಡ್ಡಕಿಟ್ಟದಹಳ್ಳಿ, ಸಣ್ಣಕಿಟ್ಟದಹಳ್ಳಿ, ಕೆಂಕೆರೆ, ನಾಕಿಕೆರೆ, ದೇವಪುರ, ಮಾಡದಕೆರೆ, ಪೂಜಾರಹಟ್ಟಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಸೋಮವಾರ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಯೋಜನಾ ತಜ್ಞ ರಮೇಶ್ ದಿಕ್ಪಾಲ್ ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಿದರು.
ನಂತರ ರಮೇಶ್ ದಿಕ್ಪಾಲ್ ಮಾತನಾಡಿ, ದೊಡ್ಡಕಿಟ್ಟದಹಳ್ಳಿ ಗ್ರಾಮದ ಅಂಚೆ ಕಚೇರಿ ಕಟ್ಟಡದ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿರುವುದು ಸೇರಿದಂತೆ ಭೂಕಂಪ ಸಂಭವಿಸಿದ್ದ ಇನ್ನಿತರ ಸ್ಥಳಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಈ ಬಗ್ಗೆ ಕೂಲಂಕಷ ಸಂಶೋಧನೆ ಮಾಡಲಾಗುವುದು ಎಂದು ತಿಳಿಸಿದರು.
ಭೂಮಿಯ ಒಳಗಿನ ಪದರಗಳು ಭೂಕಂಪ ಸಂಭವಿಸಿದ ವಿವಿಧ ಸ್ಥಳಗಳೊಂದಿಗೆ ಸಂಬಂಧ ಹೊಂದಿವೆಯೇ ಎಂಬ ವಿಚಾರವನ್ನು ಆಧಾರವಾಗಿಟ್ಟುಕೊಂಡು ಬೆಂಗಳೂರಿನ ಭೂವಿಜ್ಞಾನ ಕೇಂದ್ರದಲ್ಲಿ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ, ಭೂಕಂಪದ ಫಲಿತಾಂಶ ಧನಾತ್ಮಕವಾಗಿ ಕಂಡುಬಂದಲ್ಲಿ ಮುಂದಿನ ದಿನದಲ್ಲಿ ಭೂಕಂಪನ ಮಾಪಕ ಅಳವಡಿಸಲಾಗುವುದು ಎಂದರು.
ಡಿ.ಕೆ.ಹಳ್ಳಿ ಗ್ರಾಮದ ಯುವ ಮುಖಂಡ ಎಚ್.ಪ್ರಸನ್ನ ಮಾತನಾಡಿ, ನ.30ರಂದು ಭೂಕಂಪ ಸಂಭವಿಸಿದ ಪರಿಣಾಮದಿಂದ ಗ್ರಾಮಸ್ಥರೆಲ್ಲರೂ ಭಯಭೀತರಾಗಿ ಜೀವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.