ADVERTISEMENT

‘ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕೆ ಸೀಮಿತ’

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 5:51 IST
Last Updated 16 ಡಿಸೆಂಬರ್ 2013, 5:51 IST

ಚಿತ್ರದುರ್ಗ: ‘ಕಾಂಗ್ರೆಸ್‌ ಮುಖಂಡರು ಹಿರಿಯ ಕಾಂಗ್ರೆಸಿಗರಾದ ಸರ್ದಾರ್‌ ವಲ್ಲಭಬಾಯಿ ಪಟೇಲ್‌, ಲಾಲ್‌ ಬಹದ್ದೂರ್‌ಶಾಸ್ತ್ರಿ ಸೇರಿದಂತೆ ಇತರರನ್ನು ಸ್ಮರಿಸುವ ಕೆಲಸ ಮಾಡುತ್ತಿಲ್ಲ’ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಆರೋಪಿಸಿದರು.

ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಸ್ಮಾರಕ ಪ್ರತಿಮೆ ಏಕತಾ ಓಟ ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸರ್ದಾರ್‌ಜೀ ಅವರ ಏಕತಾ ಓಟದಲ್ಲಿ ಮಾತನಾಡಿದರು.

ಕಾಂಗ್ರೆಸ್‌ ಕೇವಲ ಕುಟುಂಬ ರಾಜಕಾರಣಕ್ಕೆ ಸೀಮಿತವಾಗಿದೆ. ಆ ಪಕ್ಷದ ಮುಖಂಡರು ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧೀಜಿ ಅವರೊಂದಿಗೆ ಹೋರಾಡಿದ ಅನೇಕ ಹಿರಿಯ ಕಾಂಗ್ರೆಸಿಗರನ್ನು ಮರೆತಿದ್ದಾರೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಸರ್ದಾರ್‌ಜೀ ಅವರಿಗಾಗಿ ಏಕತಾ ಪ್ರತಿಮೆ ಸ್ಥಾಪಿಸಲು ಈಗಾಗಲೇ ಚಾಲನೆ ನೀಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.

ಸಂಸತ್‌ ಸದಸ್ಯ ಜನಾರ್ದನಸ್ವಾಮಿ ಮಾತನಾಡಿ, ಸರ್ದಾರ್‌ಜೀ ಅವರ ಬೃಹತ್‌ ಪ್ರತಿಮೆ ಸ್ಥಾಪನೆಗೆ ದೇಶದ ಪ್ರತಿಯೊಬ್ಬರೂ ಧರ್ಮ,
ಜಾತಿ, ಪಕ್ಷಭೇದ ಮರೆತು ಬೆಂಬಲ ನೀಡಬೇಕು ಎಂದರು.

ವಕೀಲ ತಿಪ್ಪೇಸ್ವಾಮಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರ ಕೊಡುಗೆ ಅಪಾರ. ಅಲ್ಲದೆ ರಾಷ್ಟ್ರದ ಏಕೀಕರಣದಲ್ಲಿಯೂ ಕೂಡ ಅವರು ವಹಿಸಿದಂಥ ಪಾತ್ರ ಮಹತ್ವದಾಗಿದೆ ಎಂದು ತಿಳಿಸಿದರು.

ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರಾರಂಭವಾದ ಏಕತಾ ಓಟಕ್ಕೆ ಆರ್ಯ ವೈಶ್ಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಾಶಿ ವಿಶ್ವನಾಥ ಶೆಟ್ಟರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನರೇಂದ್ರನಾಥ್‌, ಬದ್ರಿನಾಥ್‌, ಕೆ.ಎಸ್‌.ನವೀನ್‌, ಮೋಹನ್‌, ವೆಂಕಟೇಶ್‌, ಕೆ.ಎಸ್‌.ಚಿತ್ರಲಿಂಗಪ್ಪ, ಏಕತಾ ಓಟ ಸಮಿತಿಯ ಡಾ.ಕೆ.ಆರ್‌.ನಿಶ್ಚಿತ್‌, ಮಲ್ಲಿಕಾರ್ಜುನ್‌ ಹಾಜರಿದ್ದರು.

ನೂರಾರು ನಾಗರಿಕರು, ಯುವಕ, ಯುವತಿಯರು, ನಮೋ ಬ್ರಿಗೇಡ್‌ನ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.