ಹೊಳಲ್ಕೆರೆ: ಪಟ್ಟಣದ ಹೊರವಲಯದ ಗುಂಡೇರಿ ರಸ್ತೆಯಲ್ಲಿ 1.20 ಎಕರೆ ಪ್ರದೇಶದ ಮೆಕ್ಕೆಜೋಳದ ಹೊಲದ ಮಧ್ಯದಲ್ಲಿ ಬೆಳೆದಿದ್ದ ₹ 2.5 ಲಕ್ಷ ಮೌಲ್ಯದ 28 ಕೆ.ಜಿ ಗಾಂಜಾ ಗಿಡಗಳನ್ನು ಅಬಕಾರಿ ಪೊಲೀಸರು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
‘ಪಟ್ಟಣ ವ್ಯಾಪ್ತಿಯ ಸರ್ವೆ ನಂಬರ್ 390/1ರ ಕಸ್ತೂರಪ್ಪ ಮತ್ತು ನರಸಿಂಹಪ್ಪ ಎಂಬುವವರ ಹೊಲದಲ್ಲಿ ಮೆಕ್ಕೆಜೋಳದ ಮಧ್ಯದ ಸಾಲುಗಳಲ್ಲಿ ಗಾಂಜಾ ಬೆಳೆಯಲಾಗಿತ್ತು. ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದು, ಜಮೀನಿನ ಮಾಲೀಕರ ಮೇಲೆ ದೂರು ದಾಖಲಿಸಲಾಗಿದೆ. ಆರೋಪಿಗಳು ತಲೆಮರೆಸಿ ಕೊಂಡಿದ್ದಾರೆ’ ಎಂದು ಅಬಕಾರಿ ಇನ್ಸ್ಪೆಕ್ಟರ್ ಲತಾ ತಿಳಿಸಿದ್ದಾರೆ.
ಸಾರ್ವಜನಿಕರ ದೂರಿನ ಮೇರೆಗೆ ಅಬಕಾರಿ ಜಂಟಿ ಆಯುಕ್ತ ಮೋಹನ್ ಕುಮಾರ್, ಉಪ ಆಯುಕ್ತ ಆರ್.ನಾಗಶಯನ ಅವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕ ಶಿವಹರಳಯ್ಯ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಅಬಕಾರಿ ಉಪ ನಿರೀಕ್ಷಕ ಡಿ.ಬಿ.ಅವಿನಾಶ್, ಅಬಕಾರಿ ರಕ್ಷಕರಾದ ದಾದಾಪೀರ್, ಬಸವರಾಜ್, ಮಧುರಾಯ, ಪ್ರವೀಣ್ ಕುಮಾರ್, ಬಸವರಾಜ್ ದಾಳಿಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.