ಚಿಕ್ಕಜಾಜೂರು: ಮಕರ ಸಂಕ್ರಮಣದ ಪ್ರಯುಕ್ತ ಗ್ರಾಮದ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರಕ್ಕೆ ಒತ್ತು ನೀಡಲಾಗಿದೆ. ಭಾನುವಾರ ನಡೆಯಲಿರುವ ಪ್ರಯುಕ್ತ ಗ್ರಾಮ ದೇವರು ಆಂಜನೇಯಸ್ವಾಮಿ, ಬನಶಂಕರಿ ಅಮ್ಮನವರ ದೇವಸ್ಥಾನ, ವೀರಭದ್ರಸ್ವಾಮಿ ದೇವಸ್ಥಾನ ಹಾಗೂ ರಾಮಕೃಷ್ಣ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮಾಡಿ ವಿಶೇಷ ಪೂಜೆಗೆ ಸಿದ್ಧತೆಗಳನ್ನು ನಡೆಸಲಾಗಿದೆ.
ಜಿಲ್ಲೆಯಲ್ಲೇ ವಿಶೇಷ ಅಲಂಕಾರ: ಗ್ರಾಮ ದೇವರು ಆಂಜನೇಯಸ್ವಾಮಿ ದೇವಸ್ಥಾನದಲ್ಲಿ 20 ವರ್ಷಗಳಿಂದ ವಿಶೇಷ ಅಲಂಕಾರ ಮಾಡುತ್ತಾ ಬಂದಿದ್ದಾರೆ. ಒಂದು ತಿಂಗಳ ಕಾಲ ನಡೆಯುವ ಧನುರ್ಮಾಸ ಪೂಜೆ ಕೊನೆಗೊಂಡ ಮಾರನೇ ದಿನ, ಮಕರ ಸಂಕ್ರಾಂತಿಯಂದು ದೇವಸ್ಥಾನ ಸಮಿತಿ ವಿಶೇಷ ಅಲಂಕಾರ ಮಾಡುವ ಮೂಲಕ ಜನಾಕರ್ಷಣೆ ಕೇಂದ್ರವನ್ನಾಗಿ ಮಾಡಲಾಗುತ್ತದೆ.
ಮುಂಜಾನೆ 6–30ಕ್ಕೆ ಸೂರ್ಯೋದಯದ ಸಮಯದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಧನುರ್ಮಾಸದ ಕೊನೆಯ ಪೂಜೆಯನ್ನು ಮತ್ತು ಪ್ರಸಾದದ ವ್ಯವಸ್ಥೆಯನ್ನು ಗ್ರಾಮದ ದಿ. ಆರ್.ಪಿ. ಸಿದ್ದಪ್ಪ ಮತ್ತು ಮಕ್ಕಳು ಕೈಗೊಳ್ಳುತ್ತಾರೆ.
ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಪಿ.ಎಸ್. ಮೂರ್ತಿ ದೇವಾಲಯದ ವಿಶೇಷ ಅಲಂಕಾರದ ಜವಾಬ್ದಾರಿಯನ್ನು 20 ವರ್ಷಗಳಿಂದ ನಿರ್ವಹಿಸುತ್ತಿದ್ದಾರೆ. ಪ್ರತಿ ವರ್ಷ ವೈವಿಧ್ಯಮಯ ಅಲಂಕಾರ ಕೈಗೊಳ್ಳುವ ಮೂಲಕ ದೇವಸ್ಥಾನದ ಅಂದ ಹೆಚ್ಚಲಿದೆ. ಆಕರ್ಷಕ ಅಲಂಕಾರ: ಈ ಬಾರಿ ಆಂಜನೇಯ, ಶ್ರೀರಾಮ ದೇವರ ವಿವಿಧ ಬಗೆಯ ಫ್ಲೆಕ್ಸ್ಗಳನ್ನು ಹಾಕಲಾಗಿದೆ.
ಅಲ್ಲದೆ, ಇದೇ ಮೊದಲ ಬಾರಿಗೆ ವೆಂಕಟೇಶ್ವರ ಹಾಗೂ ಲಕ್ಷ್ಮಿಯರ ಆಳೆತ್ತರದ ಬಂಗಾರ ಲೇಪಿತ ಮೂರ್ತಿಗಳನ್ನು ದೇವಾಲಯದ ಅಕ್ಕ ಪಕ್ಕದಲ್ಲಿರಿಸಲಾಗಿದೆ. ದೇವಾಲಯದ ಹೆಬ್ಬಾಗಿಲಿನಲ್ಲಿ ಆನೆ ಮಾದರಿಗಳನ್ನು, ಮಧ್ಯದಲ್ಲಿ ಗಣಪತಿ ಮೂರ್ತಿಯ ಮಾದರಿಯನ್ನು ಇಡಲಾಗಿದೆ. ವಿವಿಧ ಬಗೆಯ ಹೂವುಗಳು ಮತ್ತು ಪ್ಲಾಸ್ಟಿಕ್ ಅಲಂಕಾರಕ
ಹೂವುಗಳಿಂದ ದೇವಾಲಯದ ಆವರಣ ಮತ್ತು ಒಳ ಭಾಗವನ್ನು ಅಲಂಕಾರ ಮಾಡಿರುವುದು ಆಕರ್ಷಣೀಯ. ದೇವಾಲಯದ ಅಲಂಕಾರ ಮತ್ತು ದೇವರ ದರ್ಶನಕ್ಕಾಗಿ ಸುತ್ತ ಮುತ್ತಲ ಗ್ರಾಮಗಳಿಂದ ಸಹಸ್ರಾರು ಭಕ್ತರು ದೇವಾಲಯಗಳಿಗೆ ಬಂದು ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.