ADVERTISEMENT

ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸಿಬಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 16:31 IST
Last Updated 27 ಆಗಸ್ಟ್ 2020, 16:31 IST
   

ಚಿತ್ರದುರ್ಗ: ಗುತ್ತಿಗೆದಾರರೊಬ್ಬರಿಂದ ಕಚೇರಿಯಲ್ಲೇ ಲಂಚ ಸ್ವೀಕರಿಸುತ್ತಿದ್ದ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಭೂತಪ್ಪ ಹಾಗೂ ಅಕೌಂಟ್ಸ್ ಕನ್ಸಲ್‍ಟೆಂಟ್ ಸರ್ಪರಾಜ್ ಗುರುವಾರ ಭಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಡಿವೈಎಸ್‍ಪಿ ಪರಮೇಶ್ವರ್ ನೇತೃತ್ವದ ತಂಡ ಇಬ್ಬರನ್ನು ವಶಕ್ಕೆ ಪಡೆದಿದೆ. ಲಂಚ ಮೊತ್ತವಾದ ₹ 5 ಸಾವಿರವನ್ನು ಜಪ್ತಿ ಮಾಡಲಾಗಿದೆ.

ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಅಗತ್ಯವಿರುವ ಅಲ್ಯೂಮಿನಿಯಂ ಗ್ಲಾಸ್‌ ಸಾಮಗ್ರಿಯನ್ನು ಒದಗಿಸುವ ಗುತ್ತಿಗೆಯನ್ನು ವೈ.ಆರ್‌.ನಾಗೇಂದ್ರ ಎಂಬುವರು ಪಡೆದಿದ್ದರು. ₹ 99,643 ಮೊತ್ತದ ಈ ಕೆಲಸಕ್ಕೆ ಆದೇಶ ಸಿಕ್ಕಿದ್ದು, ₹ 60 ಸಾವಿರವನ್ನು ನೀಡಲಾಗಿತ್ತು. ಬಾಕಿ ಉಳಿದ ₹ 39,643ಹಣವನ್ನು ಹಸ್ತಾಂತರಿಸಲು ₹ 5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.

ADVERTISEMENT

ಈ ಕುರಿತು ವೈ.ಆರ್‌.ನಾಗೇಂದ್ರ ಅವರು ಎಸಿಬಿಗೆ ದೂರು ನೀಡಿದ್ದರು. ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದಾಗ ಮುಖ್ಯಾಧಿಕಾರಿ ಸಾಕ್ಷ್ಯ ಸಹಿತವಾಗಿ ಸಿಕ್ಕಿಬಿದ್ದಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ರಾತ್ರಿಯವರೆಗೆ ವಿಚಾರಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.