ಚಿತ್ರದುರ್ಗ: ಇಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ಕೋವಿಡ್ ರೋಗಿಗೆ ಸಹಾಯಹಸ್ತ ಚಾಚಿರುವ ನಟ ಸೋನು ಸೂದ್, ರೆಮ್ಡೆಸಿವಿರ್ ಚುಚ್ಚುಮದ್ದು ಕಳುಹಿಸಿಕೊಟ್ಟಿದ್ದಾರೆ.
ಚಿತ್ರದುರ್ಗದ ವಿನಯ್ ಎಂಬುವರಿಗೆ ಕೋವಿಡ್ ಕಾಣಿಸಿಕೊಂಡಿತ್ತು. ಚಿಕಿತ್ಸೆಗೆ ಇಲ್ಲಿಯ ಬಸಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ಸಕಾಲಕ್ಕೆ ರೆಮ್ಡೆಸಿವಿರ್ ಚುಚ್ಚುಮದ್ದು ಸಿಗದೇ ಸಮಸ್ಯೆಗೆ ಸಿಲುಕಿದ್ದರು. ಈ ಸಂಗತಿಯನ್ನು ವಿನಯ್ ಅವರ ಪತ್ನಿ ಪೂಜಾ ಟ್ವೀಟ್ ಮಾಡಿದ್ದರು. ಇದನ್ನು ಕ್ರಿಕೆಟ್ ಆಟಗಾರ ಹರಭಜನ್ ಸಿಂಗ್ ಹಂಚಿಕೊಂಡಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಸೋನು ಸೂದ್, ‘ಚುಚ್ಚುಮದ್ದು ತಲುಪಲಿದೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
‘ರೆಮ್ಡೆಸಿವಿರ್ ಇನ್ನೂ ಕೈಸೇರಿಲ್ಲ. ಶೀಘ್ರವೇ ತಲುಪುವ ನಿರೀಕ್ಷೆ ಇದೆ’ ಎಂದು ಪೂಜಾ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.