ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನಲ್ಲಿ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಜೀವಾಣುಗಳ ಮಿಶ್ರಣವನ್ನು ರೈತರಿಗೆ ನೀಡಲಾಯಿತು
ಹಿರಿಯೂರು: ಅಡಿಕೆಯಲ್ಲಿ ಅಂತರ ಬೆಳೆಯಾಗಿ ಹಣ್ಣು ಮತ್ತು ಸಾಂಬಾರು ಪದಾರ್ಥಗಳನ್ನು ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಲು ನೆರವಾಗುತ್ತದೆ ಎಂದು ಭರಮಸಾಗರದ ಪ್ರಗತಿಪರ ರೈತ ಲೋಕೇಶ್ ಹೇಳಿದರು.
ತಾಲ್ಲೂಕಿನ ಬಬ್ಬೂರು ಫಾರಂನಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಈಚೆಗೆ ಆಯೋಜಿಸಿದ್ದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಜೈವಿಕ ಗೊಬ್ಬರ ಮತ್ತು ಜೈವಿಕ ಪೀಡೆನಾಶಕಗಳ ಬಳಕೆ ಹಾಗೂ ಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್ ತಯಾರಿಕೆ ಕುರಿತು ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಡಿಮೆ ನೀರು ಸಾಕಾಗುವ ಮರ ಆಧಾರಿತ ಕೃಷಿ, ಮಿಶ್ರ ಬೆಳೆ ಪದ್ಧತಿ ಹಾಗೂ ಸಮಗ್ರ ಕೃಷಿ ಪದ್ಧತಿಗಳಿಗೆ ರೈತರು ಆದ್ಯತೆ ನೀಡಿದರೆ ಸುಸ್ಥಿರ ಆದಾಯ ಪಡೆಯಬಹುದು ಎಂದು ಹೇಳಿದರು.
ಅಡಿಕೆ ಸಿಪ್ಪೆ ಕಾಂಪೋಸ್ಟ್ ತಯಾರಿಕೆ ವಿಧಾವನ್ನು ಅವರು ವಿವರಿಸಿದರು. ತರಬೇತಿ ಕೇಂದ್ರದ ಮುಖ್ಯಸ್ಥ ಆರ್.ರಜನೀಕಾಂತ, ತುಮಕೂರಿನ ಮಲ್ಟಿಪ್ಲೆಕ್ಸ್ ಬಯೋಟೆಕ್ ಕಂಪನಿಯ ತಾಂತ್ರಿಕ ಮುಖ್ಯಸ್ಥ ಎಸ್. ಕುಮಾರ್ ಮಾತನಾಡಿದರು.
ಚಳ್ಳಕೆರೆ ಉಪವಿಭಾಗದ ಉಪ ಕೃಷಿ ನಿರ್ದೇಶಕ ಡಿ.ಉಮೇಶ್, ಹಿರಿಯೂರು ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕ ಎ.ವಿ. ಮಂಜುನಾಥ್ ಹಾಗೂ ಜಿಲ್ಲೆಯ ರೈತರು ಭಾಗವಹಿಸಿದ್ದರು.
ಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್ ತಯಾರಿಸಲು ಅಗತ್ಯವಿರುವ 2 ಕೆ.ಜಿ. ಸೂಕ್ಷ್ಮ ಜೀವಾಣುಗಳ ಮಿಶ್ರಣವನ್ನು ರೈತರಿಗೆ ಉಚಿತವಾಗಿ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.