ಚಿತ್ರದುರ್ಗ: ‘ವಾಯು ಮಾಲಿನ್ಯ ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ. ಮಾಲಿನ್ಯ ತಡೆಗಟ್ಟದೇ ಹೋದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆ ಇದೆ’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಪ್ರಕಾಶ್ ಕಳವಳ ವ್ಯಕ್ತಪಡಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ (ಆರ್ಟಿಒ)ಯು ಇಲ್ಲಿನ ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಏರ್ಪಡಿಸಿದ್ದ ವಾಯುಮಾಲಿನ್ಯ ನಿಯಂ ತ್ರಣ ಮಾಸಾಚರಣೆಯ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಶಬ್ದ ಮಾಲಿನ್ಯ ಹಾಗೂ ಜಲ ಮಾಲಿನ್ಯಕ್ಕೆ ವ್ಯಾಪ್ತಿ ಇದೆ. ಆದರೆ, ವಾಯು ಮಾಲಿನ್ಯ ಎಲ್ಲೆಡೆ ಹರಡಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ದೂಳು, ವಾಹನಗಳ ಹೊಗೆ, ಕಾರ್ಖಾನೆಯಿಂದ ಹೊರಬರುವ ಅನಿಲದಿಂದ ವಾಯು ಮಾಲಿನ್ಯ ಉಂಟಾಗುತ್ತಿದೆ’ ಎಂದು ಹೇಳಿದರು.
‘ದೇಶದ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯದ ಸಮಸ್ಯೆ ತೀವ್ರವಾಗಿದೆ. ಕಾರ್ಖಾನೆ, ವಾಹನ ಹಾಗೂ ಜಮೀನುಗಳಲ್ಲಿ ಬೆಳೆ ಸುಡುವುದರಿಂದಲೂ ಮಾಲಿನ್ಯ ಉಂಟಾಗುತ್ತಿದೆ. ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡಲಿದೆ. ಕ್ಯಾನ್ಸರ್ ಹಾಗೂ ಉಸಿರಾಟದ ಸಮಸ್ಯೆಯಾಗಿ ತೊಂದರೆ ನೀಡಬಹುದು. ರೈತರ ಬೆಳೆಯನ್ನು ಇದು ನಾಶಪಡಿಸಬಲ್ಲದು’ ಎಂದರು.
‘ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. 1974ರಲ್ಲಿ ಜಲ ಮಾಲಿನ್ಯ ಕಾಯ್ದೆ, 1986 ರಲ್ಲಿ ಪರಿಸರ ಸಂರಕ್ಷಣೆ ಕಾಯ್ದೆ, 1998ರಲ್ಲಿ ಅಪಾಯಕಾರಿ ತ್ಯಾಜ್ಯ ನಿರ್ವಹಣೆ ಕಾಯ್ದೆ, 2000ನೇ ಸಾಲಿನಲ್ಲಿ ಶಬ್ದ ಮಾಲಿನ್ಯ, 2011ರಲ್ಲಿ ಪ್ಲಾಸ್ಟಿಕ್ ನಿರ್ವಹಣಾ ಕಾಯ್ದೆ ಜಾರಿಗೆ ತರಲಾಗಿದೆ’ ಎಂದು ಮಾಹಿತಿ ನೀಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್ಟಿಒ) ಸಿ.ಎಸ್. ಪ್ರಮುತೇಶ್, ವಿದ್ಯಾವಿಕಾಶ ಶಿಕ್ಷಣ ಸಂಸ್ಥೆಯ ಕಾರ್ಯ ದರ್ಶಿ ವಿಜಯಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.