ಚಿತ್ರದುರ್ಗ: ‘ಟಿಕೆಟ್ ಘೋಷಣೆ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತೆರೆದ ವಾಹನದಲ್ಲಿ ಪ್ರಯಾಣಿಸಿದ್ದು ಕನಸಿನಂತೆ ಭಾಸವಾಗುತ್ತಿದೆ. ಅನಿರೀಕ್ಷಿತವಾಗಿ ಸಿಕ್ಕಿರುವ ಈ ಅವಕಾಶಕ್ಕೆ ಅಭಾರಿಯಾಗಿದ್ದೇನೆ’ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಸಂತಸ ಹಂಚಿಕೊಂಡರು.
ಇಲ್ಲಿನ ಭೋವಿ ಗುರುಪೀಠಕ್ಕೆ ಮಂಗಳವಾರ ಭೇಟಿ ನೀಡಿದ್ದ ಅವರು, ವಿವಿಧ ಮಠಾಧೀಶರ ಆಶೀರ್ವಾದ ಪಡೆದು ಮಾತನಾಡಿದರು.
‘ಪತಿ ಸಿದ್ದೇಶ್ವರ ಅಥವಾ ಮೈದುನ ಲಿಂಗರಾಜು ಅವರಿಗೆ ಟಿಕೆಟ್ ಸಿಗುವ ನಿರೀಕ್ಷೆ ಕುಟುಂಬದಲ್ಲಿತ್ತು. ಟಿಕೆಟ್ ಘೋಷಣೆಯ ಸಂದರ್ಭದಲ್ಲಿ ಮಗಳು ಕುತೂಹಲದಿಂದ ಟಿ.ವಿ. ನೋಡುತ್ತಿದ್ದಳು. ದಾವಣಗೆರೆ ಕ್ಷೇತ್ರಕ್ಕೆ ನನ್ನ ಹೆಸರು ಘೋಷಣೆ ಆಗಿದ್ದನ್ನು ಕಂಡು ಅಚ್ಚರಿಯಾಯಿತು. ಪತಿಯ ಜೊತೆಗೆ ಆಗಾಗ ಕ್ಷೇತ್ರ ಸಂಚಾರ ಮಾಡಿದ್ದ ಅನುಭವ ಈಗ ಕೈಹಿಡಿಯುತ್ತಿದೆ’ ಎಂದು ಹೇಳಿದರು.
ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ, ಮಾಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ, ಹಡಪದ ಗುರುಪೀಠದ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಪುತ್ರ ಜಿ.ಎಸ್.ಅನಿತ್ಕುಮಾರ್, ಪುತ್ರಿ ಅಶ್ವಿನಿ ಶ್ರೀನಿವಾಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.