ADVERTISEMENT

ಬರವಣಿಗೆಯೇ ನನ್ನ ಆರೋಗ್ಯದ ಗುಟ್ಟು; ಕಾದಂಬರಿಕಾರ ಬಿ.ಎಲ್‌.ವೇಣು ಅಭಿಮತ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 15:33 IST
Last Updated 10 ಆಗಸ್ಟ್ 2021, 15:33 IST
‘ಕೋಟೆನಾಡಿನ ಒಂಟಿಸಲಗ ಬಿ.ಎಲ್‌.ವೇಣು’ ಕೃತಿಯನ್ನು ಕಾದಂಬರಿಕಾರ ಬಿ.ಎಲ್‌.ವೇಣು ಅವರು ಚಿತ್ರದುರ್ಗದ ತಮ್ಮ ಮನೆಯಲ್ಲಿ ಮಂಗಳವಾರ ಬಿಡುಗಡೆ ಮಾಡಿದರು. ಡಿ.ಗೋಪಾಲಸ್ವಾಮಿ ನಾಯಕ, ತಾರಾನಾಥ್, ಲೇಖಕ ಕೆ.ಎಸ್.ಪರಮೇಶ್ವರ್ ಇದ್ದಾರೆ.
‘ಕೋಟೆನಾಡಿನ ಒಂಟಿಸಲಗ ಬಿ.ಎಲ್‌.ವೇಣು’ ಕೃತಿಯನ್ನು ಕಾದಂಬರಿಕಾರ ಬಿ.ಎಲ್‌.ವೇಣು ಅವರು ಚಿತ್ರದುರ್ಗದ ತಮ್ಮ ಮನೆಯಲ್ಲಿ ಮಂಗಳವಾರ ಬಿಡುಗಡೆ ಮಾಡಿದರು. ಡಿ.ಗೋಪಾಲಸ್ವಾಮಿ ನಾಯಕ, ತಾರಾನಾಥ್, ಲೇಖಕ ಕೆ.ಎಸ್.ಪರಮೇಶ್ವರ್ ಇದ್ದಾರೆ.   

ಚಿತ್ರದುರ್ಗ: ಜೀವನದಲ್ಲಿ ಎಂತಹ ಸವಾಲುಗಳು ಎದುರಾದರೂ ಸಾಹಿತ್ಯ ರಚನೆ ಬಿಡಲಿಲ್ಲ. ಬರವಣಿಗೆಯೇ ನನ್ನ ಆರೋಗ್ಯದ ಗುಟ್ಟು ಎಂದು ಕಾದಂಬರಿಕಾರ ಬಿ.ಎಲ್‌.ವೇಣು ತಿಳಿಸಿದರು.

ಬಿ.ಎಲ್‌.ವೇಣು ಅವರ ಜೀವನದ ಕುರಿತು ಕೆ.ಎಸ್‌.ಪರಮೇಶ್ವರ್‌ ಹೊರತಂದಿರುವ ‘ಕೋಟೆನಾಡಿನ ಒಂಟಿಸಲಗ ಬಿ.ಎಲ್‌.ವೇಣು’ ಕೃತಿಯನ್ನು ಮಂಗಳವಾರ ಬಿಡುಗಡೆ ಮಾಡಿ ಮಾತನಾಡಿದರು. ಕೋವಿಡ್‌ ಕಾರಣಕ್ಕೆ ಅವರ ಮನೆಯಲ್ಲೇ ಕೃತಿ ಬಿಡುಗಡೆ ಸಮಾರಂಭ ಸರಳವಾಗಿ ನಡೆಯಿತು.

‘ಬರೆಯುವ ಚೈತನ್ಯ ಇರುವವರೆಗೂ ಸಾಹಿತ್ಯ ರಚನೆ ಬಿಡುವುದಿಲ್ಲ. ಅನಕ್ಷರಸ್ಥರಿಗೂ ಬರವಣಿಗೆ ತಲುಪಬೇಕು ಎಂಬುದು ನನ್ನ ಆಸೆ. ಬರವಣಿಗೆಯಲ್ಲಿ ಬಿಗಿತನ ಕಾಯ್ದುಕೊಂಡಿದ್ದೇನೆ. ಯಾವುದೇ ಮುಲಾಜು, ರಾಜಿ ಇಲ್ಲದೇ ನೇರವಾಗಿ ಮಾತನಾಡುವುದು ನನ್ನ ಸ್ವಭಾವ’ ಎಂದು ಹೇಳಿದರು.

ADVERTISEMENT

‘ಕಥೆ, ಕಾದಂಬರಿ ಬರೆದುಕೊಂಡಿದ್ದ ನಾನು ಆಕಸ್ಮಿಕವಾಗಿ ಚಿತ್ರ ನಿರ್ದೇಶಕರ ಕಣ್ಣಿಗೆ ಬಿದ್ದು ಸಿನಿಮಾಗಳಿಗೆ ಸಂಭಾಷಣೆ ಬರೆದೆ. ಹಲವು ವಿರೋಧಗಳನ್ನು ಮೆಟ್ಟಿನಿಂತಿದ್ದರ ಫಲವಾಗಿ ಬರಹಗಾರನಾಗಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. ಆದರೆ, ಇತ್ತೀಚಿಗೆ ಕಾದಂಬರಿಗಳನ್ನು ಓದುವವರ ಸಂಖ್ಯೆ ಕಡಿಮೆಯಾಗಿದೆ’ ಎಂದು ಹೇಳಿದರು.

‘ಬೆಂಗಳೂರಿನಲ್ಲಿ ನಡೆದ ಬೆಳ್ಳಿಹೆಜ್ಜೆ ಕಾರ್ಯಕ್ರಮದಲ್ಲಿ ದೊಡ್ಡ ಸಾಹಿತಿ, ಬರಹಗಾರ, ಸಿನಿಮಾ ನಿರ್ದೇಶಕರು, ನಿರ್ಮಾಪಕರು ಮಾಡಿದ ಗುಣಗಾನವನ್ನು ಸರಕಾಗಿಟ್ಟುಕೊಂಡು ಪುಸ್ತಕ ಹೊರತಂದಿರುವುದು ಖುಷಿ ಕೊಟ್ಟಿದೆ ಎಂದರು.

ಲೇಖಕ ಕೆ.ಎಸ್.ಪರಮೇಶ್ವರ್, ಪ್ರಕಾಶಕ ತಾರಾನಾಥ್ ಭದ್ರಾವತಿ, ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ, ರವಿರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.