ಮೊಳಕಾಲ್ಮುರು (ಚಿತ್ರದುರ್ಗ): ‘ಬಾದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ಧ ನಾನು ಸೋಲಲು ಮತದಾರರು ಕಾರಣರಲ್ಲ. ಬಿಜೆಪಿಯ ಕೆಲ ಮುಖಂಡರ ಷಡ್ಯಂತ್ರ ಕಾರಣ’ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು.
ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿ, ‘ರಾಷ್ಟ್ರನಾಯಕರಾದ ನರೇಂದ್ರ ಮೋದಿ, ಅಮಿತ್ ಶಾ ರೀತಿಯಲ್ಲಿ ಸಣ್ಣ ಬೇಡ ಕುಲದಲ್ಲಿ ಹುಟ್ಟಿರುವ ಶ್ರೀರಾಮುಲು ಎರಡು ಕಡೆ ಸ್ಪರ್ಧೆ ಮಾಡುತ್ತಿದ್ದಾರೆ. ಗೆದ್ದರೆ ಮುಂದೆ ನಮಗೇ ಮುಳ್ಳಾಗಬಹುದು ಎಂದು ಕೆಲ ಬಿಜೆಪಿ ಮುಖಂಡರು ನನ್ನ ವಿರುದ್ಧ ಪಿತೂರಿ ನಡೆಸಿ ಸೋಲಿಸಿದರು. ಕೇವಲ 1,400 ಮತಗಳ ಅಂತರದಲ್ಲಿ ನಾನು ಅಲ್ಲಿ ಸೋತೆ. ಮೊಳಕಾಲ್ಮುರಿನ ಜನ ನನ್ನ ಕೈ ಹಿಡಿಯದಿದ್ದರೆ 30 ವರ್ಷಗಳ ನನ್ನ ರಾಜಕೀಯ ಜೀವನ ನಾಶವಾಗುತ್ತಿತ್ತು. ಮೊಳಕಾಲ್ಮುರಿನ ಋಣವನ್ನು ಸಾಯುವ ತನಕ ಮರೆಯುವುದಿಲ್ಲ’ ಎಂದರು.
‘ರಾಜಕಾರಣದಲ್ಲಿ ನಾನು ಎಂದೂ ಹೆದರಿಲ್ಲ. ಎಲ್ಲೋ ಒಂದು ಕಡೆ ನನ್ನ ವಿರುದ್ಧ ಪಿತೂರಿಗಳು ನಡೆಯುತ್ತಿವೆ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.