ADVERTISEMENT

ಕಾರು ಡಿಕ್ಕಿ: ಕರಡಿ ಸ್ಥಳದಲ್ಲೇ ಸಾವು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 4:49 IST
Last Updated 28 ಏಪ್ರಿಲ್ 2021, 4:49 IST
ಮೊಳಕಾಲ್ಮುರು ತಾಲ್ಲೂಕಿನ ಹಾನಗಲ್ ಕ್ರಾಸ್‌ ಬಳಿ ಮಂಗಳವಾರ ಬೆಳಗಿನ ಜಾವ ಕಾರು ಡಿಕ್ಕಿ ಹೊಡೆದು ಮೃತಪಟ್ಟಿರುವ ಕರಡಿ.
ಮೊಳಕಾಲ್ಮುರು ತಾಲ್ಲೂಕಿನ ಹಾನಗಲ್ ಕ್ರಾಸ್‌ ಬಳಿ ಮಂಗಳವಾರ ಬೆಳಗಿನ ಜಾವ ಕಾರು ಡಿಕ್ಕಿ ಹೊಡೆದು ಮೃತಪಟ್ಟಿರುವ ಕರಡಿ.   

ಮೊಳಕಾಲ್ಮುರು: ತಾಲ್ಲೂಕಿನ ಹಾನಗಲ್ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಮುಂಜಾನೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕರಡಿಯೊಂದು ಸ್ಥಳದಲ್ಲಿಯೇ ಮೃತಪಟ್ಟಿದೆ.

ಈ ಘಟನೆಯೂ ಸೇರಿ ಒಂದೇ ತಿಂಗಳಲ್ಲಿ ತಾಲ್ಲೂಕಿನಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 4 ಕರಡಿಗಳು ಮೃತಪಟ್ಟಿವೆ.

ಮೃತ ಗಂಡು ಕರಡಿಗೆ 4-5 ವರ್ಷ ಇರಬಹುದು. ಡಿಕ್ಕಿಯ ರಭಸಕ್ಕೆ ತಲೆ ಮತ್ತು ಮುಖಕ್ಕೆ ಬಲವಾದ ಹೊಡೆತ ಬಿದ್ದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದೆ.

ADVERTISEMENT

ಸಮೀಪದ ಗುಡ್ಡ ಮತ್ತು ಕೂಡ್ಲಿಗಿ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಕರಡಿಗಳು ವಾಸವಿದ್ದು, ರಾತ್ರಿ ವೇಳೆ ಆಹಾರ, ನೀರು ಹುಡುಕಿಕೊಂಡು ನಾಡಿಗೆ ಬರುವಾಗ ಇಂತಹ ಘಟನೆಗಳು ನಡೆಯುತ್ತಿವೆ. ಅಪಘಾತಕ್ಕೆ ಕಾರಣವಾದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಕಾರು ಬೆಂಗಳೂರಿನಿಂದ ಬಳ್ಳಾರಿಗೆ ಹೋಗುತ್ತಿತ್ತು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಅರಣ್ಯಾಧಿಕಾರಿ ಮಂಜುನಾಥ್, ಸ್ಥಳೀಯ ಅಧಿಕಾರಿ ಹಸನ್ ಬಾಷಾ, ಪಶು ವೈದ್ಯಾಧಿಕಾರಿ ಡಾ.ತಿಮ್ಮಣ್ಣ ಭೇಟಿ ನೀಡಿದ್ದರು.

ಪಟ್ಟಣದ ಎಂ.ಮಹದೇವಪ್ಪ ಸಸ್ಯಕ್ಷೇತ್ರ ಆವರಣದಲ್ಲಿ ಕರಡಿ ಶವದ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯಾಧಿಕಾರಿಗಳು ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಾಣಿಪ್ರಿಯರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.