ಚಿತ್ರದುರ್ಗ: ಪರಿಶಿಷ್ಟ ಜಾತಿ ಮತ್ತು ಪಂಗಡದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮಾಸಿಕ 75 ಯೂನಿಟ್ ವರೆಗಿನ ಉಚಿತ ವಿದ್ಯುತ್ ಸೌಲಭ್ಯ ಕಲ್ಲಿಸುವ ರಾಜ್ಯ ಸರಕಾರದ ‘ಅಮೃತ ಜ್ಯೋತಿ’ ಯೋಜನೆಯ ಫಲಾನುಭವಿಗಳ ಮಾಹಿತಿ ಸಂಗ್ರಹಕ್ಕೆ ನ.10 ಅಂತಿಮ ದಿನ ಎಂದು ‘ಬೆಸ್ಕಾಂ’ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಗಡುವು ನೀಡಿದರು.
ಚಿತ್ರದುರ್ಗ ‘ಬೆಸ್ಕಾಂ’ ವಲಯ ಕಚೇರಿಯ ವ್ಯಾಪ್ತಿಯಲ್ಲಿ ಯೋಜನೆಯ ಅನುಷ್ಠಾನದ ಪ್ರಗತಿ ಪರಿಶೀಲಶಿಸಿದರು. ಬಳಿಕ ಅರ್ಹ ಗ್ರಾಹಕರ ಮನೆಗಳಿಗೆ ಭೇಟಿ ನೀಡಿ ಅರ್ಜಿ ನೋಂದಣಿ ಮಾಡಿಸಿದರು.
ವಲಯ ಕಚೇರಿ ವ್ಯಾಪ್ತಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ 78 ಸಾವಿರ ಗ್ರಾಹಕರಿದ್ದಾರೆ. ಇವರಲ್ಲಿ ಈಗಾಗಲೇ 20 ಸಾವಿರ ಗ್ರಾಹಕರ ದಾಖಲೆಗಳನ್ನು ಸೇವಾಸಿಂಧು ಜಾಲತಾಣದಲ್ಲಿ ನೋಂದಾಯಿಸಲಾಗಿದೆ ಎಂದು ‘ಬೆಸ್ಕಾಂ’ ಅಧಿಕಾರಿಗಳು ನಿರ್ದೇಶಕರಿಗೆ ಮಾಹಿತಿ ನೀಡಿದರು.
ಮಹಂತೇಶ ಬೀಳಗಿ ಮಾತನಾಡಿ, ‘ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಸ್ಥಳದಲ್ಲೇ ದಾಖಲೆಗಳನ್ನು ಸೇವಾಸಿಂಧು ಜಾಲತಾಣದಲ್ಲಿ ದಾಖಲಿಸಬೇಕು. ಅಂತರ್ಜಾಲದ ಸಂಪರ್ಕ ಲಭ್ಯವಿಲ್ಲ ಎಂಬ ಸಬೂಬು ಹೇಳುವಂತಿಲ್ಲ. ಅಂತರ್ಜಾಲ ಸೌಲಭ್ಯ ಇರುವ ಸ್ಥಳಕ್ಕೆ ತೆರಳಿ ದಾಖಲೆಗಳನ್ನು ನೋಂದಣಿ ಮಾಡಿಕೊಡಬೇಕು. ನ.10 ರೊಳಗೆ ಈ ಕಾರ್ಯ ಪೂರ್ಣಗೊಳ್ಳಬೇಕು’ ಎಂದು ತಾಕೀತು ಮಾಡಿದರು.
‘ಬೆಸ್ಕಾಂ’ ನಿರ್ದೇಶಕ (ಹಣಕಾಸು) ದರ್ಶನ್, ಚಿತ್ರದುರ್ಗ ವಲಯ ಕಚೇರಿ ಮುಖ್ಯ ಎಂಜಿನಿಯರ್ ಗೋವಿಂದಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.