ADVERTISEMENT

ನಿವೇಶನ, ವಸತಿ, ಬಗರ್‌ಹುಕುಂ ಸಾಗುವಳಿ ಪತ್ರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2024, 14:15 IST
Last Updated 8 ಆಗಸ್ಟ್ 2024, 14:15 IST
ಬಗರ್‌ಹುಕುಂ ಸಾಗುವಳಿ ಪತ್ರ, ವಸತಿ ಹಾಗೂ ನಿವೇಶನ ಸೌಲಭ್ಯಕ್ಕೆ ಆಗ್ರಹಿಸಿ ಮೊಳಕಾಲ್ಮುರಿನಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು
ಬಗರ್‌ಹುಕುಂ ಸಾಗುವಳಿ ಪತ್ರ, ವಸತಿ ಹಾಗೂ ನಿವೇಶನ ಸೌಲಭ್ಯಕ್ಕೆ ಆಗ್ರಹಿಸಿ ಮೊಳಕಾಲ್ಮುರಿನಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು    

ಮೊಳಕಾಲ್ಮುರು: ಹಲವು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವವರಿಗೆ ಸಾಗುವಳಿ ಚೀಟಿ ನೀಡಬೇಕು ಎಂದು ಆಗ್ರಹಿಸಿ ಫಲಾನುಭವಿಗಳು ಸಿಪಿಐ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

30ಕ್ಕೂ ಹೆಚ್ಚು ವರ್ಷಗಳಿಂದ ಗೋಮಾಳ ಹಾಗೂ ಸರ್ಕಾರಿ ಕರಾಬು ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬರುತ್ತಿರುವ ರೈತರಿಗೆ ಸಾಗುವಳಿ ಪತ್ರ ನೀಡಲಾಗುವುದು ಎಂದು ಸಬೂಬು ಹೇಳಲಾಗುತ್ತಿದೆ. ಈಚೆಗೆ ಹೊಸ ಕಾನೂನು ಮುಂದಿಟ್ಟುಕೊಂಡು ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ ಎಂದು ಸಿಪಿಐ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಜಾಫರ್‌ ಷರೀಫ್‌ ದೂರಿದರು.

ತಾಲ್ಲೂಕಿನಲ್ಲಿ 453 ಅರ್ಜಿಗಳ ವಿಲೇವಾರಿ ಅಂತಿಮ ಹಂತದಲ್ಲಿದ್ದು, ಮಂಜೂರಿಗೆ ಅರ್ಹವಾಗಿವೆ. ವಡೇರಹಳ್ಳಿ, ರಾಂಪುರ, ದಡಗೂರು ಸರ್ವೆ ನಂಬರ್‌ಗಳಲ್ಲಿ ಸಾಗುವಳಿ ಮಾಡುತ್ತಿರುವ 177 ಅರ್ಜಿಗಳನ್ನು ಪರಿಗಣನೆ ಮಾಡಿಲ್ಲವಾದ ಕಾರಣ ಇವನ್ನು ಮರು ಪರಿಶೀಲನೆ ಮಾಡಬೇಕು. ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ, ವಸತಿ ರಹಿತನ್ನು ಗುರುತಿಸಿ ಸೌಲಭ್ಯ ನೀಡಬೇಕು. ಸ್ಥಳವಿದ್ದರೂ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ ಎಂದು ಹೇಳಿದರು.

ADVERTISEMENT

ಕಟ್ಟಡ ಕಾರ್ಮಿಕರು ಇಲಾಖೆಯಲ್ಲಿ ಹೆಸರು ನೋಂದಣಿ ಮಾಡಿಸಲು ಇರುವ ಪ್ರಕ್ರಿಯೆಯನ್ನು ಸರಳಗೊಳಿಸಬೇಕು. ಕಾರ್ಮಿಕ ಇಲಾಖೆಯಿಂದ ನೀಡುತ್ತಿರುವ ವಸತಿ ಸಾಮಗ್ರಿಗಳು ಕಳಪೆಯಿಂದ ಕೂಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮನವಿ ಪತ್ರವನ್ನು ತಹಶೀಲ್ದಾರ್‌ ಟಿ. ಜಗದೀಶ್‌ ಅವರಿಗೆ ಸಲ್ಲಿಸಿದರು.

ಡಿ. ಪೆನ್ನಯ್ಯ, ನಾಗರಾಜ್‌, ಬೋರಯ್ಯ, ನಾಗಣ್ಣ, ಪೂಜಾರಿ ತಿಪ್ಪೇಸ್ವಾಮಿ, ಕದರಪ್ಪ, ಲಕ್ಷ್ಮಕ್ಕ, ನಾಗವೇಣಿ, ಮಾರಕ್ಕ, ತಿಪ್ಪಮ್ಮ, ಪಾಪಣ್ಣ, ರಾಜಣ್ಣ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.