ಭರಮಸಾಗರ: ಉತ್ತರ ಭಾರತದಿಂದ ಬಂದಿದ್ದ ನಾಲ್ವರು ನಾಗಾಸಾಧುಗಳು ಇಲ್ಲಿನ ಶ್ರೀಗುರು ರಾಘವೇಂದ್ರ ಕೃಪಾಶ್ರಮಕ್ಕೆ ಗುರುವಾರ ಭೇಟಿ ನೀಡಿ ರಾಯರ ಬೃಂದಾವನ ದರ್ಶನ ಪಡೆದರು.
ಹರಿದ್ವಾರದ ವೈಷ್ಣವ ದಿಗಂಬರ ಅಖಾಡದ ಮಹಾಂತ ರಾಜ್ ಗಿರಿ ಮಹಾರಾಜ್, ಬೇದ್ ಗಿರಿ ಮಹಾರಾಜ್, ವಿಕ್ರಮ್ ಗಿರಿ ಮಹಾರಾಜ್ ರಾಮೇಶ್ವರ ಯಾತ್ರೆ ಕೈಗೊಂಡಿದ್ದು, ಮಾರ್ಗ ಮಧ್ಯೆ ಪಟ್ಟಣಕ್ಕೆ ಬಂದು ರಾಯರ ದರ್ಶನ ಪಡೆದು ಭಕ್ತರಿಗೆ ಆಶೀರ್ವದಿಸಿದರು.
ಹಂಪೆಯ ಅಂಜನಾದ್ರಿ ಬೆಟ್ಟದಲ್ಲಿ ದೇವರ ದರ್ಶನ ಪಡೆದು ರಾಮೇಶ್ವರ ಯಾತ್ರೆ ಮುಂದುವರಿಸುವುದಾಗಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ ಗಿರಿ ಮಹಾರಾಜ್, ‘ಆಶ್ರಮ, ದೇವಾಲಯಗಳು ಧರ್ಮವನ್ನುಳಿಸುವ ತಾಣಗಳು. ಯಾರು ಧರ್ಮವನ್ನು ರಕ್ಷಿಸಿ ಪೋಷಿಸುತ್ತಾರೋ ಅಲ್ಲಿ ಯಾವುದೇ ಸಂಕಷ್ಟಗಳು ಎದುರಾಗುವುದಿಲ್ಲ.ಕರ್ನಾಟಕ ಧರ್ಮ ರಕ್ಷಣೆಯಲ್ಲಿ ಮಹತ್ವ ಪಾತ್ರ ನೀಡಿದೆ. ಮಠ–ಮಂದಿರಗಳ ನೆಲೆಬೀಡಾಗಿದೆ. ಎರಡು ವರ್ಷಗಳ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ. ಕರ್ನಾಟಕದಲ್ಲಿ ಬಿಜೆಪಿ ಆಡಳಿತ ಬರುತ್ತದೆ ಎಂದು ಸಾಧುಗಳು ಭವಿಷ್ಯ ನುಡಿದಿದ್ದರು. ಇದು ನಿಜವಾಯಿತು. ಸಿದ್ದರಾಮಯ್ಯ, ವಿಜಯೇಂದ್ರ, ರಾಘವೇಂದ್ರರಿಗೂ ಆಶೀರ್ವದಿಸಲಾಗಿತ್ತು’ ಎಂದು ಹೇಳಿದರು.
‘ಈಗ ಬಂದಿರುವ ಕೊರೊನಾ ಸಂಕಷ್ಟ ಬಹಳ ದಿನ ಇರುವುದಿಲ್ಲ. ಇನ್ನು ಮುಂದೆ ಬರುವ ದಿನಗಳು ಸುಭಿಕ್ಷವಾಗಿರುತ್ತವೆ’ ಎಂದರು.
ಬಳಿಕ ಜಗಳೂರು ಮಾರ್ಗದ ಮೂಲಕ ಹಂಪೆಗೆ ತೆರಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.