ಮೊಳಕಾಲ್ಮುರು: ತಾಲ್ಲೂಕಿನ ಪ್ರಾಗೈತಿಹಾಸಿಕ ಬ್ರಹ್ಮಗಿರಿ ಹಾಗೂ ರೊಪ್ಪ ಗ್ರಾಮದ ಸುತ್ತಮುತ್ತ ಪುರಾತತ್ವ ಶಾಸ್ತ್ರದ ಉತ್ಖನನ ಕಾರ್ಯಕ್ಕೆ ಈಚೆಗೆ ಚಾಲನೆ ನೀಡಲಾಯಿತು.
ಭಾರತೀಯ ಸರ್ವೇಕ್ಷಣಾ ಪುರಾತತ್ವ ಇಲಾಖೆ ಹಾಗೂ ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಸಂಯುಕ್ತವಾಗಿ ಈ ಉತ್ಖನನ ಕಾರ್ಯವನ್ನು ಕೈಗೆತ್ತಿಕೊಂಡಿದೆ.
‘1947ರಲ್ಲಿ ಸಂಶೋಧಕ ಮಾರ್ಟಿಮರ್ ವೀವರ್ ಅವರು ಇಲ್ಲಿ ಪ್ರಥಮ ಬಾರಿಗೆ ಸಂಶೋಧನೆ ಕೈಗೊಂಡಿದ್ದರು. ಆಗ ಮಧ್ಯ ಶಿಲಾಯುಗದಿಂದ ಮಧ್ಯಕಾಲೀನ ಕಾಲಘಟ್ಟದವರೆಗಿನ ಮಾಹಿತಿಯನ್ನು ಬಹಿರಂಗ ಮಾಡಿತ್ತು. ಈಗ ನಡೆಸುತ್ತಿರುವ ಉತ್ಖನನವು ಮಾರ್ಚ್ ತಿಂಗಳ ಅಂತ್ಯದವರೆಗೆ ನಡೆಯಲಿದೆ’ ಎಂದು ಪುರಾತತ್ವ ಇಲಾಖೆಯ ಅಧಿಕಾರಿ ರಾಜು ಮಾಹಿತಿ ನೀಡಿದರು.
‘ಈ ಭಾಗದಲ್ಲಿ ಕ್ರಿಸ್ತ ಪೂರ್ವದಲ್ಲಿ ಸಾಮ್ರಾಟ್ ಆಶೋಕ ಚಕ್ರವರ್ತಿ ಸ್ಥಾಪಿಸಿರುವ ಶಾಸನ, ಆಗಿನ ಕಾಲಮಾನದ ಜೈನ ಬಸದಿಗಳು, ವ್ಯಾಪಾರ, ವಹಿವಾಟು, ಶಿಲಾಯುಗ ಕಾಲದ ಸಮಾಧಿಗಳು ಕಂಡುಬಂದಿವೆ. ನೂತನ ತಂತ್ರಜ್ಞಾನದ ಮೂಲಕ ಈ ಐತಿಹ್ಯದ ಮೇಲೆ ವೈಜ್ಞಾನಿಕವಾಗಿ ಹೆಚ್ಚು ಬೆಳಕು ಚೆಲ್ಲುವ ನಿಟ್ಟಿನಲ್ಲಿ ಈಗ ಕ್ರಮ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.
ಪುರಾತತ್ವ ಇಲಾಖೆ ಅಧೀಕ್ಷಕ ಬಿಪಿನ್ ಚಂದ್ರ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಅಧ್ಯಾಪಕ ರವಿ ಕೋರಿಸೆಟ್ಟರ್, ಕರ್ನಾಟಕ ವಿಶ್ವವಿದ್ಯಾಲಯದ ಸಿಬ್ಬಂದಿ ನೇತೃತ್ವ ವಹಿಸಿದ್ದಾರೆ.
ಪುರಾತತ್ವ ಶಾಸ್ತ್ರಜ್ಞ ವೀರರಾಘವನ್, ಆರ್.ರಮೇಶ್, ವಿನುರಾಜ್ ಸಿಬ್ಬಂದಿ ಮುರಳಿ ಮೋಹನ್, ಬಸವರಾಜ ಮಾಯಾಚಾರಿ ಹಾಗೂ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಆಸ್ಟಿನ್ ಚಾಡ್ ಹಿಲ್, ಸಿ.ಎಸ್.ಅಂಬಿಲಿ, ಮೋರಿಕಾ ಮೆಕೆನ್ನಾ, ಜೆನ್ನಿಫರ್ ಫೆಂಗ್, ರಾಂಪುರ ಪಿಎಸ್ಐ ಮಹೇಶ್ ಹೊಸಪೇಟೆ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.