ADVERTISEMENT

ತಿಂಗಳಲ್ಲಿ ಸೇತುವೆ ನಿರ್ಮಿಸಲು ಚಾಲನೆ: ಚಂದ್ರಪ್ಪ ಭರವಸೆ

ಮೈನಿಂಗ್ ಲಾರಿ ಓಡಾಟಕ್ಕೆ ಬರೀ ದೂಳು: ಮುಖಂಡರ ಆರೋಪ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 5:33 IST
Last Updated 18 ಡಿಸೆಂಬರ್ 2025, 5:33 IST
ಚಿಕ್ಕಜಾಜೂರು ಸಮೀಪದ ಮುತ್ತುಗದೂರು (ತರಳಬಾಳು ನಗರ) ಗ್ರಾಮದಲ್ಲಿ ಭಾನುವಾರ ಗ್ರಾಮ ಸೌಧ ಹಾಗೂ ಅರಿವು (ಗ್ರಂಥಾಲಯ) ಕೇಂದ್ರವನ್ನು ಉದ್ಘಾಟಿಸಿದ ಶಾಸಕ ಎಂ. ಚಂದ್ರಪ್ಪ ಮಾತನಾಡಿದರು
ಚಿಕ್ಕಜಾಜೂರು ಸಮೀಪದ ಮುತ್ತುಗದೂರು (ತರಳಬಾಳು ನಗರ) ಗ್ರಾಮದಲ್ಲಿ ಭಾನುವಾರ ಗ್ರಾಮ ಸೌಧ ಹಾಗೂ ಅರಿವು (ಗ್ರಂಥಾಲಯ) ಕೇಂದ್ರವನ್ನು ಉದ್ಘಾಟಿಸಿದ ಶಾಸಕ ಎಂ. ಚಂದ್ರಪ್ಪ ಮಾತನಾಡಿದರು   

ಚಿಕ್ಕಜಾಜೂರು: ಮುತ್ತುಗದೂರು ಹಾಗೂ ಸಾಸಲು ಹಳ್ಳದಲ್ಲಿ ಮೈನಿಂಗ್ ಲಾರಿಗಳ ಓಡಾಟಗಳಿಂದ ರಸ್ತೆ, ಶಾಲಾ-ಕಾಲೇಜು, ಮನೆ, ಕುಡಿಯುವ ನೀರಿನಲ್ಲಿ ದೂಳು ತುಂಬಿ ಆರೋಗ್ಯ ಹದಗೆಡುತ್ತಿದೆ. ಆದ್ದರಿಂದ ಕಾಂಕ್ರೀಟ್‌ ರಸ್ತೆ ಹಾಗೂ ಸೇತುವೆಯನ್ನು ನಿರ್ಮಿಸಬೇಕು ಎಂದು ಕಾಂಗ್ರೆಸ್ ಮುಖಂಡರ ಒತ್ತಾಯಿಸಿದರು. 

ಸಮೀಪದ ಮುತ್ತುಗದೂರು (ಸಾಸಲುಹಳ್ಳ) ಗ್ರಾಮ ಪಂಚಾಯಿತಿ ಕಚೇರಿಯ ಕಟ್ಟಡದ ಮೇಲೆ ಸ್ವಂತ ಸಂಪನ್ಮೂಲ ಹಾಗೂ 5ನೇ ಹಣಕಾಸು ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಿದ ಗ್ರಾಮ ಸೌಧ ಮತ್ತು ಅರಿವು ಕೇಂದ್ರದ (ಗ್ರಂಥಾಲಯ ಕೇಂದ್ರ) ಹೊಸ ಕಟ್ಟಡದ ಭಾನುವಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಎಂ.ಚಂದ್ರಪ್ಪ ಅವರಲ್ಲಿ ಮನವಿ ಮಾಡಿದರು.

ಕಾಂಗ್ರೆಸ್‌ ಮುಖಂಡರಾದ ಎಂ.ಕೆ. ರುದ್ರಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಜೆ. ಓಂಕಾರಸ್ವಾಮಿ ಹಾಗೂ ಈರಣ್ಣ ಆಗ್ರಹಕ್ಕೆ ಸ್ಪಂದಿಸಿದ ಶಾಸಕರು, ‘ಒಂದು ತಿಂಗಳಲ್ಲಿ ಸಾಸಲುಹಳ್ಳದ ಸೇತುವೆಯ ಕಾಮಗಾರಿಯನ್ನು ಆರಂಭಿಸುತ್ತೇನೆ’ ಎಂದು ಭರವಸೆ ನೀಡಿದರು.

ADVERTISEMENT

ಬಿ. ದುರ್ಗದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿಗಾಗಿ ವಸತಿ ನಿರ್ಮಾಣಕ್ಕೆ ₹ 6 ಕೋಟಿ ವೆಚ್ಚ ಮಾಡಿದ್ದೇನೆ. ಹಿರೇಬೆನ್ನೂರಿನಿಂದ ಮುತ್ತುಗದೂರಿನವರೆಗೆ ರೂ. 106 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಿಸಿದ್ದೇನೆ. ವಾಣಿವಿಲಾಸ ಸಾಗರದಿಂದ ತಾಲ್ಲೂಕಿನ ಎಲ್ಲಾ ಕಡೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ₹ 400 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದ್ದು, ಈವರೆಗೆ ಶೇ. 70-80 ರಷ್ಟು ಕಾಮಗಾರಿ ಪೂರ್ಣಗೊಂಡಿದೆ.

‘ಜ. 26ರ ಒಳಗೆ ತಾಲ್ಲೂಕಿನ 36 ಕೆರೆಗಳಿಗೆ ನೀರು ತುಂಬಿಸುತ್ತೇನೆ. ಕೋಟೆಹಾಳ್‌ ಬಳಿ ₹ 500 ಕೋಟಿ ವೆಚ್ಚದಲ್ಲಿ ಬೃಹತ್‌ ವಿದ್ಯುತ್‌ ವಿತರಣಾ ಘಟಕವನ್ನು ಹಾಗೂ ಗುಂಡೇರಿ, ತಾಳ್ಯ, ತೇಕಲವಟ್ಟಿ, ಹಿರೇಎಮ್ಮಿಗನೂರು ಗ್ರಾಮಗಳಲ್ಲಿ ₹ 800 ಕೋಟಿ ವೆಚ್ಚದಲ್ಲಿ ವಿದ್ಯುತ್‌ ವಿತರಣಾ ಘಟಕಗಳನ್ನು ನಿರ್ಮಿಸಲಾಗುವುದು’ ಎಂದು ಹೇಳಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಎಚ್‌.ಟಿ. ಹನುಮಂತಪ್ಪ ಮಾತನಾಡಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಹಾಲಿ ಹಾಗೂ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು, ರೈತ ಸಂಘದ ಕಾಗಳಗೆರೆ ಸಿದ್ಧರಾಜು ಸಂಗಡಿಗರು, ಪಿಡಿಒ ಬಿ.ಜಿ. ನಟರಾಜ್‌, ಎಸ್‌.ವಿ. ಪುನೀತ್‌ ಅವರನ್ನು ಸನ್ಮಾನಿಸಿದರು.

ತಾ.ಪಂ. ಇಒ ಶಿವಪ್ರಕಾಶ್‌, ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಎಂ.ಬಿ. ಸಿದ್ದೇಶ್‌, ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀದೇವಿ ರಂಗಸ್ವಾಮಿ, ಉಪಾಧ್ಯಕ್ಷ ದೀಪಕ್‌, ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.