ADVERTISEMENT

ಖಾತೆ ನಿರ್ವಹಣೆಯಲ್ಲಿ ಶ್ರೀರಾಮುಲು ವಿಫಲ: ಬಿ.ಯೋಗೇಶ್‌ಬಾಬು ಆರೋಪ

ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಯೋಗೇಶ್‌ಬಾಬು ಆರೋಪ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 15:34 IST
Last Updated 14 ಅಕ್ಟೋಬರ್ 2020, 15:34 IST
ಡಾ.ಬಿ.ಯೋಗೇಶ್‌ಬಾಬು
ಡಾ.ಬಿ.ಯೋಗೇಶ್‌ಬಾಬು   

ಚಿತ್ರದುರ್ಗ: ಆರೋಗ್ಯ ಇಲಾಖೆ ಸಮರ್ಪಕ ನಿರ್ವಹಣೆಯಲ್ಲಿ ಸಚಿವ ಬಿ.ಶ್ರೀರಾಮುಲು ವಿಫಲರಾಗಿದ್ದರಿಂದ ಖಾತೆ ಬದಲಾವಣೆ ಮಾಡಲಾಗಿದೆ. ಸಚಿವರ ವೈಫಲ್ಯ ಮುಖ್ಯಮಂತ್ರಿಗೆ ಕೊನೆಗೂ ಗೊತ್ತಾಗಿದೆ ಎಂದು ಕಾಂಗ್ರೆಸ್ ಮುಖಂಡ ಬಿ.ಯೋಗೇಶ್‌ಬಾಬು ಆರೋಪಿಸಿದ್ದಾರೆ.

‘ಕೊರೊನಾ ವಿಶ್ವವನ್ನೇ ತಲ್ಲಣಗೊಳಿಸಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶ್ರೀರಾಮುಲು ರಾಜ್ಯದಾದ್ಯಂತ ಸಂಚಿಸಬೇಕಿತ್ತು. ಸೋಂಕು ನಿಯಂತ್ರಣಕ್ಕೆ ಮುಂದಾಗುವ ಬದಲು ನಿರ್ಲಕ್ಷ್ಯತೋರಿದ್ದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೇ ಕಾರಣಕ್ಕೆ ಶ್ರೀರಾಮುಲು ಅವರಿಗೆ ಹಿಂಬಡ್ತಿಯಾಗಿದೆ’ ಎಂದು ದೂರಿದ್ದಾರೆ.

‘ಶ್ರೀರಾಮುಲು ಆರೋಗ್ಯ ಇಲಾಖೆಯಲ್ಲಿ ಶೂನ್ಯ ಸಾಧನೆ ಮಾಡಿದ್ದಾರೆ. ಕೋವಿಡ್‌-19 ನೆಪದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಜಿಲ್ಲೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನ ಆಸ್ಪತ್ರೆ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದು ಬಡಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ದೂರಿದ್ದಾರೆ.

‘ನೂತನ ಆರೋಗ್ಯ ಸಚಿವರಾದ ಡಾ.ಕೆ. ಸುಧಾಕರ್‌ ಅವರು ಮೊಳಕಾಲ್ಮುರು ಕ್ಷೇತ್ರಕ್ಕೆ ಭೇಟಿ ನೀಡಬೇಕು. ಕ್ಷೇತ್ರ ವ್ಯಾಪ್ತಿಯ ಪರಿಸ್ಥಿತಿಯನ್ನು ಅವಲೋಕಿಸಬೇಕು. ಕೊರೊನಾ ಸೋಂಕಿತ ರೋಗಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಜನರಲ್ಲಿ ಧೈರ್ಯ ತುಂಬಬೇಕು’ ಎಂದು ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.