
ಹಿರಿಯೂರು: ‘ಚುನಾವಣೆಯಲ್ಲಿ ಗೆಲ್ಲಲು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ ಕಾಂಗ್ರೆಸ್ ಒಂದಾದ ಮೇಲೆ ಒಂದರ ಬೆಲೆ ಏರಿಸುವ ಮೂಲಕ ಜನರ ಬದುಕಿಗೆ ಬರೆ ಇಡುತ್ತಿದೆ. ಜತೆಗೆ ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದೆ’ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎನ್. ಹನುಮಂತರಾಯಪ್ಪ ಆರೋಪಿಸಿದ್ದಾರೆ.
‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು, ಸ್ಥಿರಾಸ್ತಿಗಳ ಮೌಲ್ಯ ಹೆಚ್ಚಿಸಿತು. ಜೊತೆಗೆ ಮುದ್ರಾಂಕ ಶುಲ್ಕ ಹೆಚ್ಚಿಸಿ ಬಡ ಹಾಗೂ ಮಧ್ಯಮ ವರ್ಗದವರು ಆಸ್ತಿ, ನಿವೇಶನಗಳನ್ನು ಖರೀದಿಸಲು ಸಾಧ್ಯವಿಲ್ಲದ ಸ್ಥಿತಿಗೆ ತಂದಿತು. ಇದು ಸಾಲದು ಎಂಬಂತೆ ಮದ್ಯದ ದರವನ್ನು ಮನಸೋ ಇಚ್ಛೆ ಹೆಚ್ಚಿಸಿ, ಸಾವಿರಾರು ಮದ್ಯದಂಗಡಿಗಳಿಗೆ ಪರವಾನಗಿ ಕೊಟ್ಟಿತು’ ಎಂದು ಪ್ರಕಟಣೆಯಲ್ಲಿ ದೂರಿದ್ದಾರೆ.
‘ರಾಜ್ಯದಲ್ಲಿರುವುದು ತುಘಲಕ್ ಸರ್ಕಾರ. ಇದನ್ನು ಹೀಗೆಯೇ ಬಿಟ್ಟರೆ ರಾಜ್ಯವನ್ನು ಹುರಿದು ಮುಕ್ಕಿ ಬಿಡುತ್ತಾರೆ. ಕಾಂಗ್ರೆಸ್ ದುರಾಡಳಿತ, ಜನವಿರೋಧಿ ನೀತಿ ವಿರೋಧಿಸಿ ಶೀಘ್ರ ಜೆಡಿಎಸ್ನಿಂದ ರಾಜ್ಯದಾದ್ಯಂತ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.