
ಚಿತ್ರದುರ್ಗ: ‘ತಹಶೀಲ್ದಾರ್ಗಳ ನಿರ್ಲಕ್ಷ್ಯದಿಂದ ಪರಿಶಿಷ್ಟ ಜಾತಿಯವರು ಜಾತಿ ಪ್ರಮಾಣ ಪತ್ರ ಪಡೆಯುವುದು ದುಬಾರಿಯಾಗಿದೆ. ಆದ್ದರಿಂದ ಹೊಸ ನೇಮಕಾತಿ ಅವಧಿಯೊಳಗೆ ಪ್ರತಿಯೊಬ್ಬರಿಗೂ ಜಾತಿ ಪ್ರಮಾಣ ಪತ್ರ ವಿತರಿಸಲು ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು’ ಎಂದು ಡಾ.ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಒತ್ತಾಯಿಸಿದರು.
ನಗರದ ಕೋಟೆ ನಾಡು ಬುದ್ಧ ವಿಹಾರದಲ್ಲಿ ಭಾನುವಾರ ಆಯೋಜಿಸಿದ್ದ ‘ಒಳ ಮೀಸಲಾತಿ ಜಾರಿ; ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯುವಲ್ಲಿನ ಸಮಸ್ಯೆಗಳು’ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ‘ಪರಿಶಿಷ್ಟ ಜಾತಿಯಲ್ಲಿನ ಎಲ್ಲರೂ ಹೊಸದಾಗಿ ಜಾತಿ ಪ್ರಮಾಣ ಪತ್ರ ಪಡೆಯುವುದು ಅನಿವಾರ್ಯವಾಗಿದೆ. ಜತೆಗೆ ಕಡ್ಡಾಯವಾಗಿ ಅಫಿಡವಿಟ್ ಮಾಡಿಸಬೇಕೆಂದು ಹೇಳಿರುವ ಕಾರಣ ಒಂದು ಮನೆಯಲ್ಲಿ ಕನಿಷ್ಠ ಐದಾರು ಜನಗಳಿದ್ದರೆ ₹1,500 ರಿಂದ ₹2,000 ಕಡ್ಡಾಯವಾಗಿ ಖರ್ಚು ಮಾಡಬೇಕಾಗುತ್ತದೆ’ ಎಂದು ತಿಳಿಸಿದರು.
‘ರಾಜ್ಯದಲ್ಲಿ ನಡೆದ ಒಳ ಮೀಸಲಾತಿ ಜಾತಿ ಸಮೀಕ್ಷೆಯಲ್ಲಿ 4.72ಲಕ್ಷ ಮಂದಿ ಜಾತಿ ಘೋಷಣೆ ಮಾಡಿದ್ದು, ಅವರು ಆದಿಕರ್ನಾಟಕ, ಆದಿದ್ರಾವಿಡ, ಆದಿ ಆಂಧ್ರ ಎಂದು ದಾಖಲಿಸಿದ್ದಾರೆ. ಆದರೆ ಅವರು ಮೂಲ ಜಾತಿ ಗುರುತಿಸಿಲ್ಲ. ಸರ್ಕಾರ ಮೀಸಲಾತಿ ಪಡೆಯಲು ಪ್ರವರ್ಗ ಎ ಅಥವಾ ಬಿ ನಲ್ಲಿ ಕಡ್ಡಾಯವಾಗಿ ಗುರುತಿಸಲು ಆದೇಶಿಸಿದೆ. ಆದರೆ, ತಹಶೀಲ್ದಾರ್ಗಳ ನಿರ್ಲಕ್ಷತೆಯಿಂದ ಪರಿಶಿಷ್ಟ ಜಾತಿಗಳ ದಲಿತರು ಜಾತಿ ಪ್ರಮಾಣ ಪತ್ರ ಪಡೆಯುವುದು ದುಬಾರಿಯಾಗಿದೆ’ ಎಂದು ದೂರಿದರು.
‘ಪ್ರವರ್ಗ ಎ ಅಥವಾ ಬಿ ಗೆ ಸೇರಲು ಅಫಿಡವಿಟ್ ಸಲ್ಲಿಸುವ ಅವಶ್ಯಕತೆ ಇದೆ. ಉಳಿದಂತೆ ಜಾತಿ ಗಣತಿಯ ಸಂದರ್ಭದಲ್ಲಿ ಯಾರು ತಮ್ಮ ಜಾತಿಯನ್ನು ಘೋಷಿಸಿದ್ದಾರೋ ಅಂತವರು ಅಫಿಡವಿಟ್ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಒಂದು ಬಿಳಿ ಹಾಳೆಯಲ್ಲಿನ ಅನುಬಂಧವನ್ನು ಭರ್ತಿ ಮಾಡಿ ಸಲ್ಲಿಸಿದರೆ ಸಾಕು. ಎಲ್ಲಾ ತಹಶೀಲ್ದಾರರು ಈ ಬಗ್ಗೆ ಗಮನ ಹರಿಸಿ ಕಾನೂನು ರೀತಿ ಕ್ರಮ ಕೈಗೊಳ್ಳುವ ಮೂಲಕ ಅನಗತ್ಯ ಹಣಕಾಸಿನ ವೆಚ್ಚದ ಅಫಿಡವಿಟ್ ಮಾಡಿಸುವ ಹಾಗೂ ಸಮಯ ಹಾಳು ಮಾಡುವ ಕಿರುಕುಳವನ್ನು ತಪ್ಪಿಸಬೇಕು’ ಎಂದು ಆಗ್ರಹಿಸಿದರು.
ನಿಸರ್ಗ ಟ್ರಸ್ಟ್ ಅಧ್ಯಕ್ಷ ದುರ್ಗೇಶಪ್ಪ, ಉಪನ್ಯಾಸಕ ಈ.ನಾಗೇಂದ್ರಪ್ಪ, ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ಪಿಲ್ಲಳ್ಳಿ ಹರೀಶ್, ಮುಖಂಡರಾದ ತಿಪ್ಪೇಸ್ವಾಮಿ, ರಮೇಶ್, ಉಷಾ, ಶಾಂತಲಾ, ತಿಪ್ಪಮ್ಮ, ಲಾವಣ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.