ಹಿರಿಯೂರು: ತಾಲ್ಲೂಕಿನ ಚಳಮಡು ಅರಣ್ಯ ಪ್ರದೇಶದಲ್ಲಿ ಬುಧವಾರ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.
‘ಸುಮಾರು 5ರಿಂದ 6 ವರ್ಷ ಪ್ರಾಯದ ಗಂಡು ಚಿರತೆಯನ್ನು ಸೆರೆ ಹಿಡಿಯಲಾಗಿದೆ. ಚಿತ್ರದುರ್ಗದ ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯದಲ್ಲಿ ವೈದ್ಯರು ತಪಾಸಣೆ ಮಾಡಿದ ನಂತರ ಬೇರೆ ಜಿಲ್ಲೆಯ ಅಭಯಾರಣ್ಯಕ್ಕೆ ಬಿಡುವ ಬಗ್ಗೆ ತೀರ್ಮಾನಿಸುತ್ತೇವೆ’ ಎಂದು ವಲಯ ಅರಣ್ಯಾಧಿಕಾರಿ ಹರ್ಷ ‘ಪ್ರಜಾವಾಣಿ’ಗೆ ತಿಳಿಸಿದರು.
ತಪ್ಪದ ಆತಂಕ: ‘ಹಿಂದಿನ ಹತ್ತು ದಿನದ ಅಂತರದಲ್ಲಿ 15ಕ್ಕೂ ಹೆಚ್ಚು ಸಾಕು ನಾಯಿಗಳನ್ನು, ಆರೇಳು ಕುರಿ ಮತ್ತು ಮೇಕೆ ಮರಿಗಳನ್ನು ಚಿರತೆ ತಿಂದು ಹಾಕಿತ್ತು. ಇದಲ್ಲದೆ ದೊಡ್ಡ ಹೆಣ್ಣು ಚಿರತೆ ಸೇರಿ ಇನ್ನೂ ಮೂರ್ನಾಲ್ಕು ಚಿರತೆಗಳಿವೆ. ಗಂಡು ಚಿರತೆಯನ್ನು ಸೆರೆ ಹಿಡಿದಿರುವ ಕಾರಣ ಉಳಿದಿರುವ ಚಿರತೆಗಳು ಎಲ್ಲಿ ಮನುಷ್ಯರ ಮೇಲೆ ದಾಳಿ ಮಾಡುತ್ತವೋ ಎಂದು ಭಯವಾಗುತ್ತಿದೆ’ ಎಂದು ಅರಣ್ಯದ ಅಂಚಿನ ಪ್ರದೇಶದ ನಿವಾಸಿ ರೈತ ಪರಶಿವಮೂರ್ತಿ ಆತಂಕ ವ್ಯಕ್ತಪಡಿಸಿದರು.
‘ಒಂದು ವೇಳೆ ಚಿರತೆಗಳ ಸಂಖ್ಯೆ ಹೆಚ್ಚಿದ್ದರೆ ಒಂದೆರಡು ದಿನದಲ್ಲಿ ಎಲ್ಲಿಯಾದರೂ ಪ್ರಾಣಿಗಳ ಮೇಲೆ ದಾಳಿ ಮಾಡಿಯೇ ಮಾಡುತ್ತವೆ. ಮೂರ್ನಾಲ್ಕು ದಿನಗಳು ಅರಣ್ಯದ ಅಂಚಿನಲ್ಲಿರುವ ಜನರು ಎಚ್ಚರಿಕೆಯಿಂದ ಇರಬೇಕು. ಸಂಜೆಯ ನಂತರ ಒಂಟಿಯಾಗಿ ಹೊರಗೆ ಬರಬಾರದು’ ಎಂದು ಅರಣ್ಯಾಧಿಕಾರಿ ಹರ್ಷ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.