ADVERTISEMENT

ಹೊಸದುರ್ಗ: ಕಡಲೆಗೆ ಸೊರಗು ರೋಗ, ಕಾಯಿಕೊರಕ ಬಾಧೆ

ಹೊಸದುರ್ಗ ತಾಲ್ಲೂಕಿನಲ್ಲಿ 3,380 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ; ಬಾರದ ಇಳುವರಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 6:42 IST
Last Updated 8 ಜನವರಿ 2026, 6:42 IST
ಹೊಸದುರ್ಗದ ಹೊನ್ನೇಕೆರೆ ಗ್ರಾಮದಲ್ಲಿನ ಕಡಲೆ ಬೆಳೆ ಜಮೀನಿಗೆ ಮಂಗಳವಾರ ಸಹಾಯಕ ಕೃಷಿ ನಿರ್ದೇಶಕರ ಸಿ.ಎಸ್. ಈಶ ಭೇಟಿ ನೀಡಿ, ರೈತರಿಗೆ ಸಲಹೆ ನೀಡಿದರು
ಹೊಸದುರ್ಗದ ಹೊನ್ನೇಕೆರೆ ಗ್ರಾಮದಲ್ಲಿನ ಕಡಲೆ ಬೆಳೆ ಜಮೀನಿಗೆ ಮಂಗಳವಾರ ಸಹಾಯಕ ಕೃಷಿ ನಿರ್ದೇಶಕರ ಸಿ.ಎಸ್. ಈಶ ಭೇಟಿ ನೀಡಿ, ರೈತರಿಗೆ ಸಲಹೆ ನೀಡಿದರು   

ಹೊಸದುರ್ಗ: ತಾಲ್ಲೂಕಿನಾದ್ಯಂತ ಕಡಲೆ ಬೆಳೆಗೆ ಸೊರಗು ರೋಗ ಆವರಿಸಿದ್ದು, ಬೆಳೆಯೆಲ್ಲ ಸಂಪೂರ್ಣ ಇಳುವರಿ ಕುಂಠಿತವಾಗಿದೆ. ಈರುಳ್ಳಿ ಬೆಳೆಯಿಂದ ನಷ್ಟ ಅನುಭವಿಸಿದ್ದ ರೈತರು, ಕಡಲೆ ಬಿತ್ತನೆಗೆ ಮುಂದಾಗಿದ್ದರು. ಆದರೀಗ ಕಡಲೆ ಬೆಳೆಯೂ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು, ರೈತರು ಚಿಂತೆಗೀಡಾಗಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬರಲಿಲ್ಲ. ಬೆಳೆಗಳ ಕೊಯ್ಲು ಹಂತದಲ್ಲಿ ಮಳೆಯಾದ ಪರಿಣಾಮ ಮುಂಗಾರು ಬೆಳೆಯಿಂದ ರೈತರು ಆದಾಯ ಪಡೆಯಲು ಆಗಲಿಲ್ಲ. ಹಿಂಗಾರು ಹಂಗಾಮಿನ ಪ್ರಮುಖ ಬೆಳೆ ಕಡಲೆ ಉತ್ತಮ ಆದಾಯ ತಂದುಕೊಡಬಹುದು  ಎಂಬ ನಿರೀಕ್ಷೆಯಲ್ಲಿದ್ದ ರೈತರು, ಕಡಲೆಗೆ ಸೊರಗು ರೋಗ ಹಾಗೂ ಕಾಯಿಕೊರಕ ಹುಳು ಆವರಿಸಿರುವುದರಿಂದ ಕಂಗಾಲಾಗಿದ್ದಾರೆ. 

ಸೊರಗು ರೋಗವು ಸಸ್ಯಗಳ ಕಾಂಡ ಮತ್ತು ಬೇರುಗಳಲ್ಲಿ ಶಿಲೀಂದ್ರಗಳು ಸೇರಿ, ನೀರು ಮತ್ತು ಪೋಷಕಾಂಶಗಳ ಸಾಗಾಣಿಕೆಗೆ ಅಡ್ಡಿಪಡಿಸುವುದು. ಗಿಡಗಳು ಹಳದಿ ಬಣ್ಣಕ್ಕೆ ತಿರುಗಿ, ಸಂಪೂರ್ಣವಾಗಿ ಒಣಗಿ ಹೋಗುತ್ತವೆ.

ADVERTISEMENT

ತಾಲ್ಲೂಕಿನ ಒಟ್ಟು 3,380 ಹೆಕ್ಟೇರ್‌ ಎರೆ ಭೂಮಿಯಲ್ಲಿ ಕಡಲೆ ಬಿತ್ತನೆಯಾಗಿದೆ. ಕಸಬಾ ಹೋಬಳಿಯ ಬಾಗೂರು, ಕಂಗುವಳ್ಳಿ, ಆನಿವಾಳ, ಸಾಣೇಹಳ್ಳಿ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಹಳ್ಳಿಗಳಲ್ಲೂ ಕಡಲೆ ಬಿತ್ತಲಾಗಿದೆ. ಸದ್ಯ ರೈತರು ಸೊರಗು ರೋಗದ ಜೊತೆಗೆ ಕಾಯಿಕೊರಕ ಹುಳು ಬಾಧೆಯನ್ನೂ ಎದುರಿಸುತ್ತಿದ್ದಾರೆ.

ಸೆಪ್ಟೆಂಬರ್ ಕೊನೆಯ ವಾರದಿಂದ ಅಕ್ಟೋಬರ್ ಮೊದಲ ವಾರದವರೆಗೆ ಕಡಲೆ ಬಿತ್ತನೆಯಾಗಿದ್ದು, ಉತ್ತಮ ಮಳೆ, ಚಳಿ ಹಾಗೂ ಮಂಜಿನ ವಾತಾವರಣದಲ್ಲಿ ಹುಲುಸಾಗಿ ಬೆಳೆದಿತ್ತು. ಕೀಟಬಾಧೆಯಿಂದ ಬೆಳೆ ರಕ್ಷಿಸಲು ರೈತರು ಬಹಳಷ್ಟು ಶ್ರಮ ವಹಿಸಿದ್ದಾರೆ. ಸಣ್ಣ ಗಿಡಗಳಿಗೂ ರೋಗ ಆವರಿಸಿದ್ದು, ಕಾಯಿ ಕಟ್ಟುತ್ತಿಲ್ಲ. ಎರಡು ತಿಂಗಳ ಬೆಳೆ, ಸದ್ಯ ಫಲ ನೀಡುವ ಹಂತದಲ್ಲಿದೆ. ಆದರೆ ಸೊರಗು ರೋಗದಿಂದಾಗಿ ಇಳುವರಿ ಕುಂಠಿತವಾಗುವ ಸಾಧ್ಯತೆ ಹೆಚ್ಚಿದೆ.

‘ಸಮೃದ್ಧವಾಗಿ ಬೆಳೆದು, ಕಾಳು ಕಟ್ಟುವ ಹಂತದಲ್ಲಿರುವ ಬೆಳೆಯಲ್ಲಿ ರೋಗ ಆವರಿಸಿದ್ದು, ಇಳುವರಿ ಕುಸಿಯುವ, ನಷ್ಟ ಉಂಟಾಗುವ ಭೀತಿ ಎದುರಾಗಿದೆ’ ಎನ್ನುತ್ತಾರೆ ಬಾಗೂರಿನ ರೈತ ರುದ್ರೇಶ್.

‘ಹವಾಮಾನ ವೈಪರೀತ್ಯದಿಂದ ಭೂಮಿಯಲ್ಲಿ ಬೇರು ಕಡಿಯುವ ಶಿಲೀಂಧ್ರಗಳ ಸಂಖ್ಯೆ ಹೆಚ್ಚುತ್ತದೆ. ಬಿತ್ತನೆಗೂ ಮೊದಲು ಬೀಜೋಪಚಾರ ಮಾಡಬೇಕು. ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ, ಶೀಲಿಂದ್ರಗಳು ಬಿಸಿಲಿನ ತಾಪಕ್ಕೆ ಬತ್ತುವಂತೆ ನೋಡಿಕೊಳ್ಳಬೇಕು. ವರ್ಷವರ್ಷ ಬೆಳೆ ಬದಲಾಯಿಸಬೇಕು. ಆಗ ಮಾತ್ರ ರೋಗ ನಿಯಂತ್ರಿಸಲು ಸಾಧ್ಯ’ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಈಶ ಸಲಹೆ ನೀಡಿದರು.

ಮುಂಗಾರು ಹಂಗಾಮಿನ ಬೆಳೆಯೂ ಕೈಸೇರಲಿಲ್ಲ. ಹಿಂಗಾರಿನಲ್ಲಿ ಕಡಲೆ ಬಿತ್ತಲಾಗಿದೆ. ಈಗ ಲಾಭ ಬರುವುದಿರಲಿ ಹಾಕಿರುವ ವೆಚ್ಚ ಬಂದರೆ ಸಾಕು ಎನ್ನುವಂತಾಗಿದೆ
ಯುವರಾಜ್ ರೈತ ಶ್ರೀರಂಗಪುರ

ರೋಗ ನಿಯಂತ್ರಣಕ್ಕೆ ಹೀಗೆ ಮಾಡಿ

ರೋಗ ನಿಯಂತ್ರಣಕ್ಕೆ ಬಯೋಸ್ಪಿನ್ ಕಾರ್ಬನ್ ಡೈಜಿಮ್ ಅನ್ನು 1 ಲೀಟರ್‌ ನೀರಿಗೆ 2 ಗ್ರಾಂನಂತೆ ಬೆರೆಸಿ ಗಿಡದ ಬುಡಕ್ಕೆ ಹಾಕಬೇಕು. ಕಾಯಿಕೊರಕ ಹುಳು ಬಾಧೆಗೆ ಹೀಮಾಮೆಕ್ಟಿನ್ ಬೆಂಜೋಯೇಟ್ 1 ಲೀಟರ್ ನೀರಿಗೆ 0.5 ಗ್ರಾಂ ಹಾಕಿ ಸಿಂಪಡಿಸಬೇಕು. ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಇವು ದೊರೆಯಲಿವೆ. ಲಘು ಪೋಷಕಾಂಶಗಳ ಮಿಶ್ರಣವನ್ನು ಒಂದು ಲೀಟರ್‌ ನೀರಿಗೆ 4 ಎಂ.ಎಲ್ ಹಾಕಿ ಸಿಂಪಡಣೆ ಮಾಡುವುದರಿಂದ ಉತ್ತಮವಾಗಿ ಕಾಯಿ ಕಟ್ಟುತ್ತದೆ. ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಹೇಳಿದರು. – ಸಿ.ಎಸ್. ಈಶ ಸಹಾಯಕ ಕೃಷಿ ನಿರ್ದೇಶಕ ಹೊಸದುರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.