ADVERTISEMENT

ಚಿತ್ರದುರ್ಗ | ಕಾರು- ಲಾರಿ ನಡುವೆ ಭೀಕರ ಅಪಘಾತ: ಐದು ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2023, 4:41 IST
Last Updated 13 ಆಗಸ್ಟ್ 2023, 4:41 IST
ಅಪಘಾತ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು
ಅಪಘಾತ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು   

ಚಿತ್ರದುರ್ಗ: ತಾಲ್ಲೂಕಿನ ಮಲ್ಲಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಕಾರು-ಲಾರಿ ನಡುವೆ ಭಾನುವಾರ ನಸುಕಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಮೃತರನ್ನು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಕುದರಿ ಸಾಲವಡಗಿಯ ಗ್ರಾಮದ ಸಂಗನಬಸವಪ್ಪ (36), ಪತ್ನಿ ರೇಖಾ (29), ಪುತ್ರ ಅಗಸ್ತ್ಯ (7), ಸಂಬಂಧಿ ಭೀಮಾಶಂಕರ್ (26) ಹಾಗೂ ಚಾಲಕ ಮಧುಸೂದನ್ (25) ಎಂದು ಗುರುತಿಸಲಾಗಿದೆ. ಸಂಗನಬಸವಪ್ಪ ಅವರ ಮತ್ತೊಬ್ಬ ಪುತ್ರ

ಆದರ್ಶ (3), ಪುತ್ರಿ ಅನ್ವಿಕಾ (5) ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

ಬ್ಯಾಂಕ್ ನೌಕರರಾಗಿದ್ದ ಸಂಗನಬಸಪ್ಪ ರಜೆ ಇರುವುದರಿಂದ ಚಿಕ್ಕಮಗಳೂರು ಪ್ರವಾಸಕ್ಕೆ ತೆರಳುತ್ತಿದ್ದರು. ಶನಿವಾರ ರಾತ್ರಿ 11 ಗಂಟೆಗೆ ವಿಜಯಪುರ ಜಿಲ್ಲೆಯಿಂದ ಪ್ರಯಾಣ ಬೆಳೆಸಿದ್ದರು. ಚಿತ್ರದುರ್ಗ ಸಮೀಪದ ಮಲ್ಲಾಪುರ ಸಮೀಪ ಭಾನುವಾರ ನಸುಕಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಲಾರಿಯೊಂದಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದಲ್ಲಿ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮಧುಸೂದನ್ ಮೃತಪಟ್ಟಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.