ADVERTISEMENT

ಚಿತ್ರದುರ್ಗ| ಸೈಬರ್‌ ವಂಚನೆಗಳಿಗೆ ಜಾಗೃತಿಯೇ ಪರಿಹಾರ: ರಂಗಸ್ವಾಮಿ

ಸುರಕ್ಷಿತ ಅಂತರ್ಜಾಲ ದಿನಾಚರಣೆ; ಜಿ.ಪಂ ಉಪ ಕಾರ್ಯದರ್ಶಿ ರಂಗಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 7:49 IST
Last Updated 11 ಫೆಬ್ರುವರಿ 2026, 7:49 IST
ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸುರಕ್ಷಿತ ಅಂತರ್ಜಾಲ ದಿನಾಚರಣೆಯನ್ನು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರಂಗಸ್ವಾಮಿ ಉದ್ಘಾಟಿಸಿದರು
ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸುರಕ್ಷಿತ ಅಂತರ್ಜಾಲ ದಿನಾಚರಣೆಯನ್ನು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರಂಗಸ್ವಾಮಿ ಉದ್ಘಾಟಿಸಿದರು   

ಚಿತ್ರದುರ್ಗ: ‘ಆಧುನಿಕ ಯುಗದಲ್ಲಿ ಅಂತರ್ಜಾಲದ ಬಳಕೆ ಅನಿವಾರ್ಯವಾಗಿದ್ದರೂ ಅದರ ಹಿಂದಿರುವ ಸೈಬರ್ ಅಪಾಯಗಳ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳುವುದು ಅಗತ್ಯವಾಗಿದೆ. ಸೈಬರ್ ವಂಚನೆಗಳಿಗೆ ಜಾಗೃತಿಯೇ ಪರಿಹಾರವಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ರಂಗಸ್ವಾಮಿ ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ ಆಶ್ರಯದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸುರಕ್ಷಿತ ಅಂತರ್ಜಾಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಮಕ್ಕಳ ಪೋಷಣೆ ವಿಚಾರದಲ್ಲಿ ಪೋಷಕರಿಗೆ ತಾಳ್ಮೆ ಕಡಿಮೆಯಾಗುತಿದೆ. ಮಕ್ಕಳಿಗೆ ಕತೆ ಹೇಳಿ ಊಟ ಮಾಡಿಸುವ ಬದಲು ತಾಯಂದಿರು ಇಂದು ಮಕ್ಕಳ ಕೈಗೆ ಮೊಬೈಲ್ ನೀಡುತಿದ್ದಾರೆ. ಪಬ್‌ಜಿಯಂತಹ ಆನ್‌ಲೈನ್ ಆಟಗಳಿಗೆ ದಾಸರಾಗಿ ಕೆಲ ಯುವಕರು ಜೀವ ಕಳೆದುಕೊಂಡಿರುವುದು ಕಳವಳಕಾರಿ ಸಂಗತಿ. ಮಕ್ಕಳಿಗೆ ಮೊಬೈಲ್ ನೀಡುವ ಬದಲು ಅವರೊಂದಿಗೆ ಸಮಯ ಕಳೆಯಬೇಕು’ ಎಂದರು.

ADVERTISEMENT

‘ಮಕ್ಕಳ ದೈಹಿಕ ಆಟಗಳಿಗೆ ಪೋಷಕರು ಪ್ರೋತ್ಸಾಹ ನೀಡಬೇಕು. ಮೊಬೈಲ್ ಗೀಳು ಮಕ್ಕಳ ಭವಿಷ್ಯಕ್ಕೆ ಮಾರಕವಾಗುತ್ತಿದೆ. ಈ ಬಗ್ಗೆ ಪೋಷಕರು ಎಚ್ಚರವಹಿಸಬೇಕು. ಮಕ್ಕಳಲ್ಲಿ ಪುಸ್ತಕ ಓದುವಂತಹ ಹವ್ಯಾಸಗಳನ್ನು ಮೂಡಿಸಬೇಕು’ ಎಂದರು.

ಸೈಬರ್ ವಿಭಾಗದ ಸಬ್‌ ಇನ್‌ಸ್ಪೆಕ್ಟರ್‌ ಕಾಂತರಾಜು ಮಾತನಾಡಿ ‘ಇತ್ತೀಚಿನ ದಿನಗಳಲ್ಲಿ ವಂಚಕರು ಮುಂಬೈ ಅಥವಾ ದೆಹಲಿಯ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ವಂಚಿಸುತ್ತಿದ್ಧಾರೆ. ವಾಟ್ಸ್‌ ಆ್ಯಪ್‌ ವಿಡಿಯೊ ಕರೆ ಮಾಡಿ ಅಕ್ರಮ ವಹಿವಾಟಿನ ಹೆಸರಿನಲ್ಲಿ ಜನರನ್ನು ಮನೆಯಲ್ಲೇ ಬಂಧಿಯಾಗಿರಿಸುವ ‘ಡಿಜಿಟಲ್ ಅರೆಸ್ಟ್’ ತಂತ್ರ ಅನುಸರಿಸುತ್ತಿದ್ದಾರೆ. ಜಿಲ್ಲೆಯ ವೈದ್ಯರೊಬ್ಬರು ಇಂತಹ ಜಾಲಕ್ಕೆ ಸಿಲುಕಿ ಬರೋಬ್ಬರಿ ₹ 1.27 ಕೋಟಿ ಕಳೆದುಕೊಂಡಿರುವುದು ಆಘಾತಕಾರಿ ವಿಷಯ’ ಎಂದರು.

‘ಸಾಮಾಜಿಕ ಜಾಲತಾಣಗಳಲ್ಲಿ ಬರುವ ತಕ್ಷಣ ಸಾಲ ಅಥವಾ ಹೆಚ್ಚಿನ ಲಾಭದ ಆಮಿಷಗಳಿಗೆ ಮರುಳಾಗಬಾರದು. ನಕಲಿ ಸಾಲದ ಆ್ಯಪ್‌ಗಳು ಗ್ಯಾಲರಿ ಪ್ರವೇಶ ಪಡೆದು ಪೋಟೋಗಳನ್ನು ಮಾರ್ಫಿಂಗ್ ಮಾಡಿ ಬ್ಲಾಕ್‌ಮೇಲ್ ಮಾಡುತ್ತವೆ. ಆದರಿಂದ ಆ್ಯಪ್‌ಗಳಿಂದ ಸಾಲ ಪಡೆಯಬಾರದು. ಆರ್‌ಬಿಐ ರಿಜಿಸ್ಟರ್ ಆಪ್‌ಗಳಲ್ಲಿ ಮಾತ್ರ ಸಾಲ ಪಡೆಯಬೇಕು’ ಎಂದರು.

‘ಕಳೆದ ವರ್ಷ ಜಿಲ್ಲೆಯ ಎಂಜಿನಿಯರ್ ಒಬ್ಬರು ಆನ್‌ಲೈನ್ ಹೂಡಿಕೆ ಜಾಲಕ್ಕೆ ಬಿದ್ದು ₹ 77 ಲಕ್ಷ ಕಳೆದುಕೊಂಡಿದ್ದಾರೆ. ಪೋನ್ ಪೇ ಅಥವಾ ಗೂಗಲ್ ಪೇ ಮೂಲಕ ಹಣ ಸ್ವೀಕರಿಸುವಾಗ ಯಾವುದೇ ಕಾರಣಕ್ಕೂ ಪಿನ್ ನಮೂದಿಸಬಾರದು. ಪಿನ್ ಎಂಬುದು ಕೇವಲ ಹಣ ಕಳುಹಿಸಲು ಮಾತ್ರ ಬಳಕೆಯಾಗುತ್ತದೆ ಎಂಬ ಕನಿಷ್ಠ ಜ್ಞಾನ ಇರಬೇಕು. ವೈವಾಹಿಕ ಜಾಲ ತಾಣಗಳಲ್ಲಿ ಮದುವೆಯ ಆಮಿಷವೊಡ್ಡಿ ಹಣ ಲೂಟಿ ಮಾಡುವ ಜಾಲ ಇದೆ. ಈ ಬಗ್ಗೆ ಎಚ್ಚರ ವಹಿಸಬೇಕು’ ಎಂದರು.

ರಾಷ್ಟ್ರೀಯ ಮಾಹಿತಿ ಕೇಂದ್ರದ ಅಧಿಕಾರಿಗಳಾದ ಮುಖೇಶ್, ಟಿ.ಟಿ.ಮನೋಜ್, ಜಿಲ್ಲಾಧಿಕಾರಿ ಕಚೇರಿಯ ಪ್ರದೀಪ್ ಇದ್ದರು.

ವಂಚನೆಯಾದರೆ 1930ಕ್ಕೆ ಕೆರೆ ಮಾಡಿ

‘ಸೈಬರ್ ವಂಚನೆ ನಡೆದ ತಕ್ಷಣ ಅಥವಾ ಹಣ ಕಳೆದುಕೊಂಡ ಮೊದಲ ಎರಡು ಗಂಟೆಗಳಲ್ಲಿ 1930 ಸಂಖ್ಯೆಗೆ ಕರೆ ಮಾಡಿ ದೂರು ನೀಡಿದರೆ ಹಣ ಮರಳಿ ಪಡೆಯುವ ಸಾಧ್ಯತೆ ಹೆಚ್ಚು. ಪಾಸ್‌ವರ್ಡ್‌ಗೆ ಹುಟ್ಟಿದ ದಿನಾಂಕ ಬದಲಿಗೆ ದೊಡ್ಡಕ್ಷರ ಸಣ್ಣಕ್ಷರ ಸಂಖ್ಯೆ ಮತ್ತು ವಿಶೇಷ ಅಕ್ಷರಗಳನ್ನೊಳಗೊಂಡ ಸಂಕೀರ್ಣ ಪಾಸ್‌ವರ್ಡ್ ಬಳಸಬೇಕು. ಅಪರಿಚಿತ ನಂಬರ್‌ಗಳಿಂದ ಬರುವ ವಿಡಿಯೊ ಕರೆಗಳನ್ನು ಸ್ವೀಕರಿಸಬಾರದು. ಇದು ಹನಿ ಟ್ರ್ಯಾಪ್‌ ಜಾಲವೂ ಜಾಗೃತವಾಗಿದ್ದು ಎಚ್ಚರ ವಹಿಸಬೇಕು’ ಎಂದು ಕಾಂತರಾಜು ತಿಳಿಸಿದರು. ‘ಆ್ಯಪ್‌ ಬಳಕೆ ಸಂಬಂಧ ಎಪಿಕೆ ಫೈಲ್‌ಗಳ ಬದಲಿಗೆ ಕೇವಲ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ಗಳಿಂದ ಮಾತ್ರ ಅಧಿಕೃತ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಬೇಕು. ಸಾರ್ವಜನಿಕ ವೈ-ಫೈ ರೈಲ್ವೆ ನಿಲ್ದಾಣ ಅಥವಾ ಕೆಫೆಗಳಲ್ಲಿ ಸಿಗುವ ಉಚಿತ ವೈ-ಫೈ ಬಳಸಿ ಬ್ಯಾಂಕಿಂಗ್ ವ್ಯವಹಾರ ನಡೆಸಬಾರದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.