ಹಿರಿಯೂರು: ಈ ಹಿಂದೆ ತಾಲ್ಲೂಕು ಬಿಜೆಪಿಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಹಲವು ಮುಖಂಡರು ಕಾಂಗ್ರೆಸ್ ಪಕ್ಷದತ್ತ ಮುಖ ಮಾಡುತ್ತಿದ್ದು, ಮಂಗಳವಾರವೂ ಕಾಂಗ್ರೆಸ್ ಸೇರ್ಪಡೆ ಮುಂದುವರಿದಿದೆ.
ಮಾಜಿ ಸಚಿವ ಡಿ. ಸುಧಾಕರ್ ವಿರೋಧಿಗಳ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ನಗರಸಭೆ ಮಾಜಿ ಸದಸ್ಯ ಜಿ. ಪ್ರೇಮ್ ಕುಮಾರ್, ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಆತ್ಮೀಯ ಬಳಗದಲ್ಲಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕರಿಯಮ್ಮ ಮತ್ತು ಅವರ ಪತಿ ದಿಂಡಾವರ ಶಿವಣ್ಣ ಮಂಗಳವಾರ ಬೆಂಬಲಿಗರ ಜೊತೆ ಸುಧಾಕರ್ ಅವರ ಸಮಕ್ಷಮದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಬಿಜೆಪಿ ತ್ಯಜಿಸಿದವರೆಲ್ಲ ಗೊಲ್ಲ ಜನಾಂಗಕ್ಕೆ ಸೇರಿದವರು.
‘2018ರ ಚುನಾವಣೆಯಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಂದ ಕಾಂಗ್ರೆಸ್ನಿಂದ ದೂರ ಉಳಿದಿದ್ದ ಬಹುತೇಕ ಮುಖಂಡರು
ಕಾಂಗ್ರೆಸ್ನಿಂದ ಮಾತ್ರ ಸಾಮಾಜಿಕ ನ್ಯಾಯ, ಅಭಿವೃದ್ಧಿ ಸಾಧ್ಯ ಎಂಬುದನ್ನು ಮನಗಂಡು ಮರಳಿ ಗೂಡಿಗೆ ಬರುತ್ತಿದ್ದಾರೆ. ಮತ್ತೊಮ್ಮೆ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಖಚಿತ ಎಂಬುದನ್ನು ಈ ಬೆಳವಣಿಗೆಗಳು ತೋರಿಸುತ್ತಿವೆ’ ಎಂದು ಸುಧಾಕರ್ ತಿಳಿಸಿದರು.
ಪಕ್ಷ ಸೇರ್ಪಡೆ ಸಮಯದಲ್ಲಿ ಈಚೆಗೆ ಕಾಂಗ್ರೆಸ್ ಸೇರಿದ್ದ ನಗರಸಭೆ ಮಾಜಿ ಅಧ್ಯಕ್ಷ ಟಿ.ಚಂದ್ರಶೇಖರ್, ಖಾದಿ ರಮೇಶ್, ಈರಲಿಂಗೇ ಗೌಡ, ಆರ್.ನಾಗೇಂದ್ರನಾಯ್ಕ್, ಬಿ.ಎಚ್. ಮಂಜುನಾಥ್, ಕಂದಿಕೆರೆ ಸುರೇಶ್ ಬಾಬು, ಶಿವು
ಯಾದವ್, ಮಹಮದ್ ಫಕೃದ್ದೀನ್, ಈ. ಮಂಜುನಾಥ್, ರವಿಚಂದ್ರ ನಾಯ್ಕ್, ಶಿವರಂಜನಿ, ಮಹೇಶ್, ಹನುಮಂತಪ್ಪ, ಸದಾನಂದ್, ರಾಮಚಂದ್ರಪ್ಪ, ಶ್ರೀನಿವಾಸ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.