
ಹೊಸದುರ್ಗ: ತಾಲ್ಲೂಕಿನ ವಿವಿಧೆಡೆ ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಹೊಸದುರ್ಗ ಪೋಲಿಸರು ಶುಕ್ರವಾರ ಬಂಧಿಸಿದ್ದಾರೆ.
ತಾಲ್ಲೂಕಿನ ಭಾಗಶೆಟ್ಟಿಹಳ್ಳಿ ಗ್ರಾಮದ ಸುರೇಶ್, ಅವಳಿಪಾಳ್ಯದ ತಿಪ್ಪೇಶ, ಬೆಲಗೂರಿನ ಅಶೋಕ ಹಾಗೂ ವಿಜಯಕುಮಾರ ಬಂಧಿತ ಆರೋಪಿಗಳು. ಇವರಿಂದ ₹ 1.50 ಲಕ್ಷ ಮೌಲ್ಯದ ನಗದು, ₹ 5 ಲಕ್ಷ ಮೌಲ್ಯದ ಅಶೋಕ ಲೇಲ್ಯಾಂಡ್ ಗೂಡ್ಸ್ ಆಟೋ, ₹ 2 ಲಕ್ಷ ಮೌಲ್ಯದ 2 ಮೋಟಾರ್ ಸೈಕಲ್ ಸೇರಿದಂತೆ ಒಟ್ಟು ₹ 8.50 ಲಕ್ಷ ಮೌಲ್ಯದ ನಗದು ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಾತ್ರಿ ವೇಳೆ ಶೆಡ್ಗಳಲ್ಲಿ ಕಟ್ಟಿಹಾಕಿದ್ದ ಜಾನುವಾರುಗಳ ಕಳ್ಳತನ ಆಗುತ್ತಿದ್ದವು. ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ 2, ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ 3 ಹಾಗೂ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಕುಮಾರ್, ಹಿರಿಯೂರು ಉಪವಿಭಾಗದ ಡಿವೈಎಸ್ಪಿ ಟಿ.ಎಂ. ಶಿವುಕುಮಾರ್ ಅವರ ಮಾರ್ಗದರ್ಶನದಲ್ಲಿ ತಂಡ ರಚಿಸಿಲಾಗಿತ್ತು. ಪೊಲೀಸ್ ನಿರೀಕ್ಷಕ ಕೆ.ಟಿ. ರಮೇಶ್, ಪಿಎಸ್ಐ ಮಹೇಶ್ ಕುಮಾರ್ ಮತ್ತು ಶ್ರೀಶೈಲ, ಸಿಬ್ಬಂದಿ ಕುಮಾರ್, ಉಮೇಶ್, ಗಂಗಾಧರ, ತಿಪ್ಪೇಸ್ವಾಮಿ, ಚಂದ್ರಪ್ಪ, ರಾಜಣ್ಣ, ಸತೀಶ್ ಹಾಗೂ ಪ್ರಕಾಶ್ ತಂಡದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.