
ಚಿತ್ರದುರ್ಗ: ಜಾತ್ಯಾತೀತ ಸಂಪ್ರದಾಯದ ಆರೂಢ ಪರಂಪರೆಯ ಕಬೀರಾನಂದ ಆಶ್ರಮದಲ್ಲಿ ಸೋಮವಾರ ಪೀಠಾಧ್ಯಕ್ಷ ಶಿವಲಿಂಗಾನಂದ ಸ್ವಾಮೀಜಿ ಅವರ ಕೌದಿಪೂಜೆ ಮೂಲಕ 96ನೇ ವರ್ಷದ ಮಹಾ ಶಿವರಾತ್ರಿ ಮಹೋತ್ಸವಕ್ಕೆ ತೆರೆಬಿದ್ದಿತು.
ಫೆ. 11 ರಂದು ಪ್ರಾರಂಭವಾದ ಮಹೋತ್ಸವ ಆರು ದಿನ ಅರ್ಥಪೂರ್ಣವಾಗಿ ನಡೆಯಿತು. ಪೀಠಾಧ್ಯಕ್ಷರ ಪಲ್ಲಕ್ಕಿ ಉತ್ಸವ ನೆರವೇರಿದ ಮರುದಿನ ಸಂಪ್ರದಾಯದಂತೆ ಕೌದಿಪೂಜೆ ನೆರವೇರಿಸಲಾಯಿತು. ಶಿವರಾತ್ರಿಯ ಜಾಗರಣೆ ನಡೆಸಿದ ಸ್ವಾಮೀಜಿ ಮುಂಜಾನೆ ವಿಭೂತಿ ಸ್ನಾನ ಮಾಡಿದ್ದರು. ಸಂಜೆ ಚಿಂದಿಬಟ್ಟೆಗಳಿಂದ ತಯಾರಿಸಿದ ಕೌದಿಯನ್ನು ಧರಿಸಿ ಪೂಜಾ ಕೈಂಕರ್ಯ ನೆರವೇರಿಸಿದರು. ರುದ್ರಾಕ್ಷಿ ಮಾಲೆ, ತಂಗಟೆ ಹೂವಿನ ಹಾರ ಅವರ ಕೊರಳನ್ನು ಅಲಂಕರಿಸಿದ್ದವು. ಶಿವನಮೂರ್ತಿಗೆ ವಿಶೇಷ ಪೂಜೆ ನೆರವೇರಿಸಿ, ಕೌದಿ ಸೇವೆ ಸಲ್ಲಿಸಿದರು. ಈ ವೇಳೆ ಜಾತಿ, ಮತದ ಚೌಕಟ್ಟು ಮೀರಿ, ಭಾವೈಕ್ಯತೆಯ ಮಂತ್ರ ಮೊಳಗಿದವು.
ಆರತಿ ತಟ್ಟೆ ಹಿಡಿದ ಮಹಿಳೆಯರು ಸ್ವಾಮೀಜಿ ಅವರ ಪೂಜಾ ಕೈಂಕರ್ಯಕ್ಕೆ ನೆರವಾದರು. ಸ್ವಾಮೀಜಿ ಮಠವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿದರು. ಕೈಯಲ್ಲಿ ಕಮಂಡಲ ಮತ್ತು ಮಣ್ಣಿನ ತಟ್ಟೆಯನ್ನು ಹಿಡಿದು ಬರುವಾಗ ಭಕ್ತರು ದರ್ಶನ ಪಡೆದು ಕಾಣಿಕೆ ಸಲ್ಲಿಸಿದರು.
ಬಿಜಿಎಸ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶನಾಥ್ ಸ್ವಾಮೀಜಿ, ಮಹೋತ್ಸವದ ಅಧ್ಯಕ್ಷ ಎಸ್. ಭಾಸ್ಕರ, ಪೈಲ್ವಾನ್ ತಿಪ್ಪೇಸ್ವಾಮಿ, ಪ್ರಶಾಂತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.