ADVERTISEMENT

ಶಿವನಾಮ ಸ್ಮರಣೆಗೆ ಸಜ್ಜಾದ ಕೋಟೆನಾಡು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 6:54 IST
Last Updated 15 ಫೆಬ್ರುವರಿ 2026, 6:54 IST
ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಕರಬೂಜ ಖರೀದಿಸುತ್ತಿರುವ ಜನ
ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಕರಬೂಜ ಖರೀದಿಸುತ್ತಿರುವ ಜನ   

ಚಿತ್ರದುರ್ಗ: ಶಿವನಾಮ ಸ್ಮರಣೆಯ ಮಹಾ ಶಿವರಾತ್ರಿಗೆ ಕೋಟೆನಾಡು ಸಜ್ಜಾಗಿದ್ದು, ಶಿವನ ದೇವಸ್ಥಾನಗಳಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಹಬ್ಬದ ಪ್ರಯುಕ್ತ ಶನಿವಾರ ಪೂಜಾ ಸಾಮಾಗ್ರಿಗಳು, ಹಣ್ಣು, ಹೂವಿನ ಖರೀದಿ ಭರಾಟೆ ಜೋರಾಗಿತ್ತು. ದೇಗುಲಗಳಲ್ಲಿ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಸೇರಿದಂತೆ ನಾನಾ ಪೂಜಾ ಕೈಂಕರ್ಯ ನಡೆಸಲು ಸಿದ್ಧತೆಗಳು ನಡೆದವು.

ನಗರದ ಹೊಳಲ್ಕೆರೆ ರಸ್ತೆಯ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನ, ಆನೆಬಾಗಿಲ ಪಾತಾಳೇಶ್ವರ, ಗಾರೆ ಬಾಗಿಲು ಈಶ್ವರ, ರಂಗಯ್ಯನ ಬಾಗಿಲ ಉಮಾ ಮಹೇಶ್ವರ, ಚಿಕ್ಕಪೇಟೆಯ ಮಲ್ಲಿಕಾರ್ಜುನ ಮಂದಿರ, ಕೋಟೆಯ ಕರಿವರ್ತಿ ಈಶ್ವರ, ಮೇಲುದುರ್ಗದ ಸಂಪಿಗೆ ಸಿದ್ದೇಶ್ವರ, ಹಿಡಂಬೇಶ್ವರ, ವೀರಭದ್ರ, ಭೈರವೇಶ್ವರ, ಗಾರೇಹಟ್ಟಿಯ ಮಹಾಬಲೇಶ್ವರ ದೇವಸ್ಥಾನಗಳಲ್ಲಿ ಮುಂಜಾನೆಯಿಂದಲೇ ಪೂಜಾ ಕಾರ್ಯಗಳು ಪ್ರಾರಂಭವಾಗಲಿವೆ.

ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೀರಶೈವ ಸಮಾಜದಿಂದ ಬೆಳಿಗ್ಗೆ 5 ಗಂಟೆಯಿಂದ 10ರ ವರೆಗೆ ಸಾಮೂಹಿಕ ರುದ್ರಾಭಿಷೇಕ ಆಯೋಜಿಸಲಾಗಿದೆ. ಬಳಿಕ ವಿಶೇಷ ಅಲಂಕಾರ ಮಾಡಲಾಗುತ್ತದೆ. ಇಡೀ ದಿನ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, 10 ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ. ದೊಡ್ಡಪೇಟೆ ಕಂಬಳಿ ಬೀದಿಯ ಬೀರಗಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ 10.30ಕ್ಕೆ ರುದ್ರಾಭಿಷೇಕ, ಬಿಲ್ವಾರ್ಚನೆ ಜರುಗಲಿದೆ. ಸಂಜೆ ಪ್ರಾರ್ಥನೆ, ರಾತ್ರಿ ಇಡೀ ಅಖಂಡ ಭಜನೆ ನಡೆಯಲಿದೆ.

ADVERTISEMENT

ಶಿವನ ದೇವಸ್ಥಾನಗಳನ್ನು ಹೊರತುಪಡಿಸಿ ಕೋಟೆಯ ಏಕನಾಥೇಶ್ವರಿ, ರಾಜ ಉತ್ಸವಾಂಭ, ಬರಗೇರಮ್ಮ, ತಿಪ್ಪಿನಘಟ್ಟಮ್ಮ, ಕಾಳಿಕಾ ಮಠೇಶ್ವರಿ, ಗೌರಸಂದ್ರ ಮಾರಮ್ಮ ಸೇರಿದಂತೆ ನಾನಾ ದೇವಾಲಯಗಳಲ್ಲಿ ವಿಶೇಷ ಅಲಂಕಾರದೊಂದಿಗೆ ಪೂಜೆ ನೆರವೇರಿಸಲಾಗುತ್ತಿದೆ.

ಹಬ್ಬದ ಅಂಗವಾಗಿ ಶನಿವಾರ ಮಾರುಕಟ್ಟೆ ಕಳೆಗಟ್ಟಿತ್ತು. ಮಾರುಕಟ್ಟೆಗೆ ತರಹೇವಾರಿ ಹಣ್ಣುಗಳು ಲಗ್ಗೆ ಇಟ್ಟಿದ್ದು, ಹಬ್ಬ ಹಾಗೂ ಪೂಜೆಗೆ ಅಗತ್ಯವಿರುವ ಸಾಮಾಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು. ಹೂ, ತರಕಾರಿ ಮಾರುಕಟ್ಟೆಗಳು ಗ್ರಾಹಕರಿಂದ ಕಿಕ್ಕಿರಿದು ತುಂಬಿದ್ದವು. ಕಲ್ಲಂಗಡಿ, ಕರಬೂಜ ಸೇರಿದಂತೆ ಇತರ ಹಣ್ಣುಗಳ ಖರೀದಿಗೆ ಜನರು ಮುಗಿಬಿದ್ದಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಹಬ್ಬದ ಅಂಗವಾಗಿ ಹಣ್ಣು, ತರಕಾರಿ ಹಾಗೂ ಹೂ ಬೆಲೆಯಲ್ಲಿ ಬದಲಾವಣೆ ಕಂಡುಬಂದಿತು. ಕಳೆದ ವಾರಕ್ಕಿಂತ ಈ ವಾರ ಬೆಲೆ ಏರಿಕೆ ಆಗಿತ್ತು. ಮಾರುಕಟ್ಟೆಯಲ್ಲಿ ಕೆ.ಜಿ. ಕಲ್ಲಂಗಡಿ ₹ 30ರಿಂದ ₹ 40, ಕರಬೂಜ  ₹ 40ರಿಂದ ₹ 50, ಕಿತ್ತಳೆ ₹ 100, ಸೇಬು ₹ 180ರಿಂದ ₹ 200, ಬಾಳೆಹಣ್ಣು ₹ 80ರಿಂದ ₹ 100, ತೆಂಗಿನ ಕಾಯಿ ₹ 40ರಿಂದ ₹ 60, ಸಗಟು ಮಾರುಕಟ್ಟೆಯಲ್ಲಿ ತಲಾ ₹ 1 ಸಾವಿರ ಗುಣಮಟ್ಟದ ಹಳದಿ, ಬಿಳಿ, ಕಲರ್‌ ಸೇವಂತಿ ₹ 5ರಿಂದ ₹ 8, ಕನಕಾಂಬರ ₹10 ಮಾರಿನಂತೆ ಮಾರಾಟವಾದವು.

ಶಿವರಾತ್ರಿ ಅಂಗವಾಗಿ ಮನೆಯಲ್ಲಿಯೂ ಸಹ ಶಿವನಿಗೆ ಅಭಿಷೇಕ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಭಾನುವಾರ ರಾತ್ರಿ ಶಿವನಾಮ ಸ್ಮರಣೆಗೆ ಭಕ್ತರು ಉತ್ಸುಕರಾಗಿದ್ದಾರೆ.

ಶೃಂಗೇರಿ ಮಠದಲ್ಲಿ ವಿಶೇಷ ಪೂಜೆ

ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯ ಕೂಡಲೀ ಶೃಂಗೇರಿ ಮಹಾಸಂಸ್ಥಾನ ಶಾಖಾಮಠದಲ್ಲಿನ ಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ. ಸ್ವಾಮಿಗೆ ಪಂಚಾಮೃತ ಅಭಿಷೇಕ ರುದ್ರಾಭಿಷೇಕ 4 ಯಾಮಗಳ ವಿಶೇಷ ಪೂಜೆ ಜರುಗಲಿದೆ. ಸಂಜೆ 6.30ರಿಂದ 9ರ ವರೆಗೂ ಮೊದಲ ರಾತ್ರಿ 9.30ರಿಂದ 12ರ ವರೆಗೂ ಎರಡನೇ ತಡರಾತ್ರಿ 12.30ರಿಂದ 3ರ ವರೆಗೂ ಮೂರನೇ 3.30ರಿಂದ ಬೆಳಗ್ಗೆ 6ರ ವರೆಗೂ ನಾಲ್ಕನೇ ಯಾಮ ಪೂಜೆ ನಡೆಯಲಿದೆ.

ಮುರುಘಾ ಮಠದಲ್ಲಿ ಶಿವರಾತ್ರಿ

ವಚನ ಗಾಯನ ಶಿವರಾತ್ರಿ ಪ್ರಯುಕ್ತ ನಗರದ ಮುರುಘಾ ಮಠದಲ್ಲಿ ಫೆ.15ರಂದು ಸಹಜ ಶಿವಯೋಗ ಇಷ್ಟಲಿಂಗ ದೀಕ್ಷೆ ವಚನ ಗಾಯನ ಉಪನ್ಯಾಸ ನಡೆಯಲಿದೆ. ಬೆಳಿಗ್ಗೆ 7.30ಕ್ಕೆ ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಸಹಜ ಶಿವಯೋಗ ಪ್ರಾತ್ಯಕ್ಷಿಕೆ ನಡೆಸಿಕೊಡುವರು. ಇಷ್ಟಲಿಂಗ ದೀಕ್ಷೆ ನೀಡುವ ಮೂಲಕ ಶಿವಯೋಗದ ಮಹತ್ವ ಹಾಗೂ ಇಷ್ಟಲಿಂಗದ ಮೂಲಕ ಲಿಂಗಾನುಸಂಧಾನದ ಬಗ್ಗೆ ತಿಳಿಸಲಿದ್ದಾರೆ. ರಾತ್ರಿ 7.30 ಕ್ಕೆ ಶರಣರ ದೃಷ್ಟಿಯಲ್ಲಿ ಶಿವರಾತ್ರಿ ಆಚರಣೆ ಹೇಗೆ ಎಂಬ ವಿಷಯ ಕುರಿತು ಸಾಹಿತಿ ಮಲ್ಲಪ್ಪ ಫಕ್ಕೀರಪ್ಪ ಕರೆಣ್ಣನವರ ಉಪನ್ಯಾಸ ನೀಡುವರು. ಚಿಕ್ಕಜಾಜೂರಿನ ಮಾರುತಿ ಭಜನಾ ಸಂಘದವರು ವಚನ ತತ್ವಪದ ಜಾನಪದ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಭಜನೆ ಪ್ರಸ್ತುತ ಪಡಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.