ADVERTISEMENT

ಮದ್ಯ ಮಾರುವವರ ಮನೆಗೆ ಬೆಂಕಿ: ಮಹಿಳೆಯರಿಗೆ ಶಾಸಕ ವೀರೇಂದ್ರ ಅಭಯ

ಹಿರೇಗುಂಟನೂರು ಗ್ರಾಮದಲ್ಲಿ ಎಗ್ಗಿಲ್ಲದೇ ಸಾಗಿದೆ ಮದ್ಯ ಮಾರಾಟ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2023, 15:45 IST
Last Updated 6 ಆಗಸ್ಟ್ 2023, 15:45 IST
ಕೆ.ಸಿ.ವೀರೇಂದ್ರ
ಕೆ.ಸಿ.ವೀರೇಂದ್ರ   

ಚಿತ್ರದುರ್ಗ: ‘ಗ್ರಾಮದಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುವವರ ಮನೆಗಳಿಗೆ ಬೆಂಕಿ ಹಚ್ಚುತ್ತೇವೆ’ ಎಂದು ಹೇಳಿದ ಮಹಿಳೆಯರಿಗೆ,  ‘ಆಯ್ತು ಬೆಂಕಿ ಹಚ್ಚಿ. ಏಕೆ ಯೋಚನೆ ಮಾಡುತ್ತೀರಿ’ ಎಂದು ಶಾಸಕ ಕೆ.ಸಿ. ವೀರೇಂದ್ರ ಸಲಹೆ ನೀಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ತಾಲ್ಲೂಕಿನ ಹಿರೇಗುಂಟನೂರು ಗ್ರಾಮದಲ್ಲಿ ಈಚೆಗೆ ತಮ್ಮನ್ನು ಭೇಟಿಯಾಗಿ, ಮದ್ಯ ಅಕ್ರಮ ಮಾರಾಟ ತಡೆಯುವಂತೆ ಮನವಿ ಮಾಡಿಕೊಂಡ ಮಹಿಳೆಯರಿಗೆ ಈ ರೀತಿ ಹೇಳಿದ್ದಾರೆ.

‘ಗ್ರಾಮದಲ್ಲಿ ಮದ್ಯವನ್ನು ಎಗ್ಗಿಲ್ಲದೇ ಮಾರಾಟ ಮಾಡುತ್ತಿರುವುದರಿಂದ ತೊಂದರೆ ಉಂಟಾಗಿದೆ. ಗಂಡಂದಿರು ಕುಡಿದು ಬಂದು ನಿತ್ಯ ಮನೆಗಳಲ್ಲಿ ಗಲಾಟೆ ಮಾಡುತ್ತಿದ್ದಾರೆ. ಮದ್ಯ ಮಾರಾಟ ತಡೆಯಲು ಈವರೆಗೆ ಯಾರೂ ಕ್ರಮ ಕೈಗೊಂಡಿಲ್ಲ. ಕೈ ಮುಗಿಯುತ್ತೇವೆ, ಈ ಬಗ್ಗೆ ಕ್ರಮ ಕೈಗೊಳ್ಳಿ’ ಎಂದು ಮಹಿಳೆಯರು ಶಾಸಕರಲ್ಲಿ ಮನವಿ ಮಾಡಿದ್ದರು.

ADVERTISEMENT

ಇದೇ ವೇಳೆ ಮಹಿಳೆಯೊಬ್ಬರು, ‘ಇಷ್ಟು ಹೇಳಿದ್ದೇವೆ, ಮುಂದೆ ಮದ್ಯ ಮಾರುವವರ ಮನೆಗಳಿಗೆ ಬೆಂಕಿ ಇಡುತ್ತೇವೆ’ ಎಂದು ಹೇಳಿದಾಗ, ಶಾಸಕ ವೀರೇಂದ್ರ, ‘ನೀನು ಬೆಂಕಿ ಇಡಮ್ಮ ನಾನಿದ್ದೇನೆ, ಯಾಕೆ ಯೋಚನೆ ಮಾಡ್ತೀಯಾ’ ಎಂದು ಹೇಳಿದ್ದಾರೆ.

‘ಹುಳು ಇರುವ ಅನ್ನ ನೀಡುವ ಹಾಸ್ಟೆಲ್ ವಾರ್ಡನ್‌ನನ್ನು ರೂಮಿನಲ್ಲಿ ಕೂಡಿಹಾಕಿ, ಹುಳ ತಿನ್ನಿಸಿ ಹೊಡೆಯಿರಿ’ ಎಂದು ವೀರೇಂದ್ರ ಶನಿವಾರವಷ್ಟೇ ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.