ಚಿತ್ರದುರ್ಗ: ‘ವಿದ್ಯಾರ್ಥಿಗಳಲ್ಲಿ ಸಹಬಾಳ್ವೆ, ಪರಸ್ಪರ ಸಹಕಾರ, ಸಾಮರಸ್ಯ ಮೂಡಿಸಲು ಎನ್ಎಸ್ಎಸ್ ಶಿಬಿರ ಸಹಕಾರಿಯಾಗಿದೆ’ ಎಂದು ಎಸ್ಜೆಎಂಐಟಿ ಪ್ರಾಂಶುಪಾಲ ಪಿ.ಬಿ.ಭರತ್ ತಿಳಿಸಿದರು.
ಹೊಳಲ್ಕೆರೆ ತಾಲ್ಲೂಕಿನ ತಿರುಮಲಾಪುರದಲ್ಲಿ ಎಸ್ಜೆಎಂಐಟಿ ಕಾಲೇಜಿನ ವತಿಯಿಂದ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ವಿಶೇಷ ವಾರ್ಷಿಕ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಎನ್ಎಸ್ಎಸ್ ವಿದ್ಯಾರ್ಥಿಗಳಲ್ಲಿ ಸಂಘಟನಾತ್ಮಕ ಹಾಗೂ ನಾಯಕತ್ವ ಗುಣ ಕಲಿಸುತ್ತದೆ. ಸಮಾಜ ಸೇವೆಯ ಪರಿಕಲ್ಪನೆ ಮೂಡಿಸುತ್ತದೆ. ಸಮಾಜಕ್ಕೆ ವಿಶೇಷ ಕೊಡುಗೆ ನೀಡಲು ಪ್ರೆರೇಪಣೆ ನೀಡುತ್ತದೆ’ ಎಂದರು.
‘ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಎನ್ಎಸ್ಎಸ್, ಯೋಗ, ಕ್ರೀಡೆ ವಿಷಯಗಳನ್ನು ಅಳವಡಿಸಲಾಗಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳು ಶಿಬಿರದಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿರುವುದು ಸಂತಸ ತಂದಿದೆ’ ಎಂದು ತಿಳಿಸಿದರು.
‘ಶಿಬಿರಕ್ಕೆ ಸಹಕಾರ ನೀಡುತ್ತೇವೆ. ವಿದ್ಯಾರ್ಥಿಗಳಿಗೆ ನಮ್ಮ ಕಡೆಯಿಂದ ಆಗಬಹುದಾದ ಸಹಾಯ ಮಾಡಿ ಶಿಬಿರ ಯಶಸ್ವಿಯಾಗಲು ಕೈಜೋಡಿಸುತ್ತೇವೆ’ ಎಂದು ಟಿ.ನುಲೇನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾಂತಮ್ಮ ನಾಗರಾಜ್ ಹೇಳಿದರು.
ಐಕ್ಯುಎಸಿ ಸಂಚಾಲಕ ಎ.ಎಂ.ರಾಜೇಶ್, ಡೀನ್ ಅಕಾಡೆಮಿಕ್ ಎಸ್.ಸಿ.ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯರಾದ ಟಿ.ಸಿ.ರಾಜಪ್ಪ, ಟಿ.ಮಹೇಶ್ವರಪ್ಪ, ಮುಖ್ಯಶಿಕ್ಷಕ ಎಸ್.ಮಂಜಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.