ADVERTISEMENT

ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಆತಂಕ

ತಾಲ್ಲೂಕಿನ ಗಡಿ ಗ್ರಾಮಗಳಲ್ಲೂ ಸೋಂಕು ಪ್ರಕರಣಗಳು

ಕೊಂಡ್ಲಹಳ್ಳಿ ಜಯಪ್ರಕಾಶ
Published 17 ಮೇ 2021, 3:10 IST
Last Updated 17 ಮೇ 2021, 3:10 IST
ಮೊಳಕಾಲ್ಮುರು ತಾಲ್ಲೂಕಿನ ಹಿರೇಕೆರೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಕಾದಿರುವ ರೋಗಿಗಳು
ಮೊಳಕಾಲ್ಮುರು ತಾಲ್ಲೂಕಿನ ಹಿರೇಕೆರೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಕಾದಿರುವ ರೋಗಿಗಳು   

ಮೊಳಕಾಲ್ಮುರು:ತಾಲ್ಲೂಕಿನಲ್ಲಿ ದಿನೇ ದಿನೇ ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಳವಾಗುವ ಜತೆಗೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ.

ಒಂದು ವಾರದಿಂದ ಸೋಂಕಿನ ಪ್ರಮಾಣ ಹೆಚ್ಚಿದೆ. ಮೊಳಕಾಲ್ಮುರು ಪಟ್ಟಣ ಮತ್ತು ವಾಣಿಜ್ಯ ಗ್ರಾಮಗಳಿಗೆ ಸೀಮಿತವಾಗಿದ್ದ ಸೋಂಕು ಈಗ ಸಣ್ಣಪುಟ್ಟ ಕುಗ್ರಾಮಗಳಿಂದಲೂ ವರದಿಯಾಗುತ್ತಿದೆ. ಇದರಿಂದ ಸೋಂಕು ಸಮುದಾಯ ಮಟ್ಟದಲ್ಲಿ ಹಬ್ಬಿದೆ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ತಾಲ್ಲೂಕಿನಲ್ಲಿ ಎರಡು ಹೋಬಳಿಗಳಿದ್ದು, ಇದರಲ್ಲಿ ದೇವಸಮುದ್ರ ಹೋಬಳಿ ಸೀಮಾಂಧ್ರ, ಬಳ್ಳಾರಿ ಜಿಲ್ಲೆಯ ಸಂಡೂರು, ಕೂಡ್ಲಿಗಿ ತಾಲ್ಲೂಕಿನ ಗಡಿಗೆ ಹೊಂದಿಕೊಂಡಿದೆ. ಬಳ್ಳಾರಿ ಜಿಲ್ಲೆಯಲ್ಲಿ ಸೋಂಕು ಹೆಚ್ಚಳವಾಗುತ್ತಿರುವುದಕ್ಕೆ ತಾಲ್ಲೂಕಿನ ಗಡಿ ಗ್ರಾಮಗಳಲ್ಲೂ ಪ್ರಕರಣಗಳು ಹೆಚ್ಚುತ್ತಿದೆ. ಇಲ್ಲಿನ ನೂರಾರು
ದಿನಗೂಲಿ ಕಾರ್ಮಿಕರು ನಿತ್ಯ ಬಳ್ಳಾರಿಗೆ ಹೋಗಿ ಬರುತ್ತಾರೆ.

ADVERTISEMENT

ಆರೋಗ್ಯ ಇಲಾಖೆ ಮೂಲಗಳ ಪ್ರಕಾರ ಮೇ ಆರಂಭದಲ್ಲಿ ಪ್ರತಿದಿನ 5-8 ಪ್ರಕರಣ ಬರುತ್ತಿದ್ದವು. ಆದರೆ 6ರಂದು 16, 10ರಂದು 31, 11ರಂದು 26, 16ರಂದು 55 ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ ಶೇ 80ಕ್ಕೂ ಹೆಚ್ಚು ಸೋಂಕಿತರು ಹಳ್ಳಿಗಳಲ್ಲಿ ಕಂಡುಬಂದಿದ್ದಾರೆ. ಆಂಧ್ರ ಗಡಿ, ಬಳ್ಳಾರಿ ಗಡಿ ಗ್ರಾಮಗಳಿಂದ ಅಧಿಕ ಸೋಂಕಿತರು ವರದಿಯಾಗಿದ್ದಾರೆ. ಇಲ್ಲಿ ಕೂಲಿ ಕಾರ್ಮಿಕರು ಹೆಚ್ಚಾಗಿದ್ದು, ಲಾಕ್‌ಡೌನ್ ಘೋಷಣೆ ನಂತರ ಸೋಂಕು ಹೆಚ್ಚಿರುವುದನ್ನು ಗಮನಿಸಿದಲ್ಲಿ ಬೆಂಗಳೂರು ಇತರೆಡೆ ವಲಸೆ ಹೋಗಿದ್ದವರು ವಾಪಸ್ ಬಂದಿರುವುದೂ ಸೋಂಕು ಹಬ್ಬಲು ಕಾರಣಎನ್ನಲಾಗಿದೆ.

‘ಗ್ರಾಮೀಣ ಪ್ರದೇಶದ ಬಿ.ಜಿ.ಕೆರೆ, ಕೊಂಡ್ಲಹಳ್ಳಿ, ನಾಗಸಮುದ್ರ, ಹಿರೇಕೆರೆಹಳ್ಳಿ, ರಾಂಪುರ, ಅಶೋಕ ಸಿದ್ದಾಪುರ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ದ್ವಿಗುಣವಾಗಿದೆ. ಹಿರೇಕೆರೆಹಳ್ಳಿ ಆಸ್ಪತ್ರೆಗೆ ನಿತ್ಯ 120-150 ರೋಗಿಗಳು ಹೊರರೋಗಿ ವಿಭಾಗದಲ್ಲಿ ಬಂದು ಹೋಗುತ್ತಿದ್ದಾರೆ’ ಎಂದು ವೈದ್ಯ ಡಾ. ಚನ್ನಬಸವರಾಜ್
ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.