ADVERTISEMENT

ಆನ್‌ಲೈನ್‌ ವಹಿವಾಟು: ಎಚ್ಚರ ಅಗತ್ಯ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2020, 11:19 IST
Last Updated 2 ಡಿಸೆಂಬರ್ 2020, 11:19 IST
ಚಿತ್ರದುರ್ಗದ ಸೈಬರ್‌ ಪೊಲೀಸ್‌ ಠಾಣೆ ರೂಪಿಸಿದ ಜನಜಾಗೃತಿ ಧ್ವನಿಸುರುಳಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಬುಧವಾರ ಬಿಡುಗಡೆ ಮಾಡಿದರು.
ಚಿತ್ರದುರ್ಗದ ಸೈಬರ್‌ ಪೊಲೀಸ್‌ ಠಾಣೆ ರೂಪಿಸಿದ ಜನಜಾಗೃತಿ ಧ್ವನಿಸುರುಳಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಬುಧವಾರ ಬಿಡುಗಡೆ ಮಾಡಿದರು.   

ಚಿತ್ರದುರ್ಗ: ಆನ್‌ಲೈನ್‌ ವ್ಯವಹಾರದಿಂದ ಎಷ್ಟು ಪ್ರಯೋಜನಗಳಿಯೋ ಅಷ್ಟೇ ಅಪಾಯಗಳು ಇವೆ. ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಮೋಸ ಹೋಗುವುದನ್ನು ತಪ್ಪಿಸಬಹುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಅಭಿಪ್ರಾಯಪಟ್ಟರು.

ಸೈಬರ್‌ ಪೊಲೀಸ್‌ ಠಾಣೆ ರೂಪಿಸಿದ ಜನಜಾಗೃತಿ ಧ್ವನಿಸುರುಳಿಯನ್ನು ಬುಧವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಆನ್‌ಲೈನ್‌ ವಹಿವಾಟು ಜೀವನದ ಭಾಗವಾಗಿದೆ. ಬಹುತೇಕ ಎಲ್ಲರೂ ಆನ್‌ಲೈನ್‌ ವ್ಯವಹಾರ ನಡೆಸುತ್ತಿದ್ದಾರೆ. ಬಟ್ಟೆ, ತರಕಾರಿ ಖರೀದಿಯೂ ಸುಲಭವಾಗಿದೆ. ಮನೆಯಲ್ಲಿಯೇ ಕುಳಿತು ಅಗತ್ಯ ವಸ್ತುಗಳನ್ನು ಖರೀದಿಸುವ ಅವಕಾಶ ಸಿಕ್ಕಿದೆ. ಎಚ್ಚರ ತಪ್ಪಿದರೆ ಅಪಾಯಕ್ಕೆ ಸಿಲುಕುವುದು ನಿಶ್ಚಿತ’ ಎಂದರು.

ADVERTISEMENT

‘ಬ್ಯಾಂಕ್‌ ಅಧಿಕಾರಿಗಳ ಹೆಸರಿನಲ್ಲಿ ಅನೇಕರು ವಂಚನೆ ಮಾಡುತ್ತಿದ್ದಾರೆ. ಒಟಿಪಿಯನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳದಂತೆ ಜಾಗೃತಿ ಮೂಡಿಸಿದರೂ ಮೋಸ ಹೋಗುವವರ ಸಂಖ್ಯೆ ಕಡಿಮೆಯಾಗಿಲ್ಲ. ಬಹುಮಾನ, ಕೊಡುಗೆಗಳ ನೆಪದಲ್ಲಿ ಸಾರ್ವಜನಿಕರನ್ನು ವಂಚಿಸುವ ಜಾಲ ಸಕ್ರಿಯವಾಗಿದೆ. ಪ್ರತಿಯೊಬ್ಬರು ಸುರಕ್ಷತೆಗೆ ಒತ್ತು ನೀಡಿದಾಗ ಮಾತ್ರ ನಿರಾತಂಕವಾಗಿ ವಹಿವಾಟು ನಡೆಸಬಹುದು’ ಎಂದು ಹೇಳಿದರು.

‘ವ್ಯಾಲೆಟ್‌ಗೆ ಹಣ ತುಂಬುವ ನೆಪದಲ್ಲಿ ಮೋಸ ಮಾಡಲಾಗುತ್ತಿದೆ. ಎಟಿಎಂ ಕಾರ್ಡ್‌ ನೀಡುವ ಆಮಿಷವೊಡ್ಡಿ ವಂಚಿಸಲಾಗುತ್ತಿದೆ. ಹಣವನ್ನು ಪುಕ್ಕಟೆಯಾಗಿ ಯಾರೊಬ್ಬರು ನೀಡುವುದಿಲ್ಲ. ದುಡಿದ ಹಣವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವ ಜಾಣ್ಮೆಯನ್ನು ಕಲಿತುಕೊಳ್ಳಬೇಕು. ವಂಚನೆ ಆಗುತ್ತಿರುವುದು ಗಮನಕ್ಕೆ ಬಂದ ತಕ್ಷಣ ಪೊಲೀಸರನ್ನು ಸಂಪರ್ಕಿಸಬೇಕು’ ಎಂದು ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಬಿ.ನಂದಗಾವಿ, ಎಪಿಎಂಸಿ ಮಾಜಿ ಅಧ್ಯಕ್ಷ ತಿಮ್ಮಣ್ಣ, ಡಾ.ರವೀಂದ್ರ ರೆಡ್ಡಿ, ಠಾಣೆಯ ಇನ್‌ಸ್ಪೆಕ್ಟರ್‌ ರಮಾಕಾಂತ್‌, ಎಸ್‌ಐ ಸ್ವಾತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.