ಚಿತ್ರದುರ್ಗ: ದಸರಾ ಮಹೋತ್ಸವದ ನವರಾತ್ರಿ ಸಂಭ್ರಮಕ್ಕೆ ವಿಜಯ ದಶಮಿ ಮೂಲಕ ಅದ್ದೂರಿ ತೆರೆ ಬಿದ್ದಿತು. ಜಿಲ್ಲೆಯಾದ್ಯಂತ ಭಕ್ತರು ಮಂಗಳವಾರ ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ಬನ್ನಿ ಮುಡಿಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು.
ಒಂಭತ್ತು ದಿನ ಶಕ್ತಿ ದೇವತೆಗಳಿಗೆ ನವರಾತ್ರಿ ಪೂಜೆ ಸಲ್ಲಿಸುವ ಭಕ್ತರಿಗೆ ಆಯುಧ ಪೂಜೆ, ವಿಜಯದಶಮಿ ಬಹಳ ಮಹತ್ವದ್ದಾಗಿವೆ. ಸೋಮವಾರ ದೇವರ ಮೂರ್ತಿ, ಮನೆಯ ಅಲಂಕಾರ, ವಾಹನಗಳು, ಯಂತ್ರೋಪಕರಣ ಹಾಗೂ ಎಲೆಕ್ಟ್ರಿಕಲ್ ವಸ್ತುಗಳನ್ನು ಅಲಂಕರಿಸಿ ಆಯುಧ ಪೂಜೆ ನೆರವೇರಿಸಿದರು.
ನಗರದ ಮದಕರಿ ನಾಯಕನ ವೃತ್ತದಲ್ಲಿ ವಾಹನಗಳ ಅಲಂಕಾರಕ್ಕಾಗೇ ಮಳಿಗೆಗಳನ್ನು ತೆರೆಯಲಾಗಿತ್ತು. ಇದರಿಂದಾಗಿ ಕಾರು, ಬೈಕ್, ಬಸ್, ಲಾರಿಗಳು ವಿಶೇಷ ಹೂವಿನ ಅಲಂಕಾರದಲ್ಲಿ ಕಂಗೊಳಿಸಿದವು. ಮನೆಗಳ ಮುಂದೆ ವಾಹನಗಳಿಗೆ ಪೂಜೆ ಸಲ್ಲಿಸಿದ ಬಳಿಕ ನಗರದಲ್ಲಿ ಒಂದು ಸುತ್ತು ಹಾಕಿ ವಾಹನ ಮಾಲೀಕರು ಸಂಭ್ರಮಿಸಿದರು.
ಆಯುಧ ಪೂಜೆಯನ್ನು ಶಾಸ್ತ್ರೋಕ್ತವಾಗಿ ಪೂರ್ಣಗೊಳಿಸಿದ ಭಕ್ತರು ಮಂಗಳವಾರದ ವಿಜಯದಶಮಿಗೆ ಸಿದ್ಧತೆ ನಡೆಸಿದ್ದರು. ಸೂರ್ಯ ಉದಯಿಸುವ ಮುನ್ನವೇ ಮಹಿಳೆಯರು ಮನೆಗಳಲ್ಲಿ ಪೂಜಾ ಕೈಂಕರ್ಯ ಪೂರ್ಣಗೊಳಿಸಿದರು. ಬಳಿಕ ಕುಟುಂಬ ಸಮೇತ ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ದೇವಸ್ಥಾನಗಳಿಗೆ ತೆರಳಿ ಬನ್ನಿ ಪಡೆದರು.
ಮೇಲುದುರ್ಗದ ಏಕನಾಥೇಶ್ವರಿ, ಕೋಟೆ ರಸ್ತೆಯ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ, ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮಿ, ಅಂಬಾಭವಾನಿ, ಹೊಳಲ್ಕೆರೆ ರಸ್ತೆಯ ಬರಗೇರಮ್ಮ, ಗೌರಸಂದ್ರ ಮಾರಮ್ಮ, ಕುಂಚಿಗನಾಳ್ ಬಳಿಯ ಕಣಿವೆ ಮಾರಮ್ಮ, ನಗರವಾಸಿ ಕಣಿವೆ ಮಾರಮ್ಮ, ಬುರುಜನಹಟ್ಟಿಯ ಮಲೆನಾಡ ಚೌಡೇಶ್ವರಿ, ಬನಶಂಕರಿ, ಹಟ್ಟಿ ಮಾರಮ್ಮ, ಸಂತೆ ಹೊಂಡ ಬಳಿಯ ಬನ್ನಿ ಮಹಾಕಾಳಿ, ಕಾಮನಬಾವಿ ಬಡಾವಣೆಯ ಕಾಳಿಕಾ ಮಠೇಶ್ವರಿ ಹೀಗೆ ದೇವಿಯರ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರದೊಂದಿಗೆ ಪೂಜೆ ನಡೆಸಲಾಯಿತು.
ಹಳೆ ಚಿತ್ರದುರ್ಗ ಭಾಗದವರು ಮೇಲುದುರ್ಗದ ಶಮಿ ವೃಕ್ಷಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಉಳಿದಂತೆ ಜೋಗಿಮಟ್ಟಿ ರಸ್ತೆ, ಸಂತೆಹೊಂಡದ ಮಾರಮ್ಮ ದೇವಿ ಬಡಾವಣೆಗಳಲ್ಲಿ ನಿರ್ಮಿಸಿದ ಬನ್ನಿ ಕಟ್ಟೆಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಮನೆಯ ಹಿರಿಯರು ಹೆಣ್ಣು ಮಕ್ಕಳಿಗೆ ಹಸಿರು ಬಳೆಗಳನ್ನು ನೀಡಿ ಶುಭ ಹಾರೈಸಿದರು. ಮನೆಗಳಲ್ಲಿ ಗುರು–ಹಿರಿಯರಿಗೆ ಬನ್ನಿ ಹಂಚುವ ಮೂಲಕ ವಿಜಯದಶಮಿ ಹಬ್ಬದ ಶುಭಾಶಯ ಕೋರುವ ದೃಶ್ಯ ಸಾಮಾನ್ಯವಾಗಿತ್ತು. ಕಿರಿಯರು ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಸಾಮಾಜಿಕ ಜಾಲತಾಣಗಳ ಮೂಲಕವೂ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡಿದ್ದು ವಿಶೇಷವಾಗಿತ್ತು.
ಬರಗೇರಮ್ಮ ದೇವತೆಯ ದೇಗುಲದಲ್ಲಿ ನವದುರ್ಗಿಯರ ಅವತಾರದ ರೀತಿಯಲ್ಲಿ ಒಂಬತ್ತು ದಿನಗಳೂ ಬಗೆಬಗೆಯ ವಿಶೇಷ ಪೂಜೆ ನೆರವೇರಿತು. ವಿಜಯದಶಮಿ ದಿನ ವಿಶೇಷ ಪೂಜೆ ಜರುಗಿತು. ಮುಂಜಾನೆ 5.30ಕ್ಕೆ ನಡೆದ ಪ್ರಥಮ ಪೂಜೆಗೆ ಸಾವಿರಾರು ಭಕ್ತರು ನೆರೆದಿದ್ದರು. ರಾತ್ರಿ 10ರವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ದೇವಿ ಮೂರ್ತಿಯ ಅಲಂಕಾರ ನೋಡಿ ಭಕ್ತರು ಪುನೀತರಾದರು. ನಗರದ ಕಣಿವೆ ಮಾರಮ್ಮ, ಏಕನಾಥೇಶ್ವರಿ, ಉಚ್ಚಂಗಿ ಯಲ್ಲಮ್ಮ ದೇಗುಲದಲ್ಲೂ ವಿಶೇಷ ಅಲಂಕಾರ ಸೇವೆಗಳು ನಡೆದವು.
ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನದ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ನಗರದ ಸಂತೆ ಹೊಂಡದ ಬಳಿಯ ಬನ್ನಿ ಮಹಾಕಾಳಿ ದೇವಸ್ಥಾನದ ಮುಂಭಾಗ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಿಯ ಕೆಂಡಾರ್ಚನೆ ನೆರವೇರಿತು. ಬರ ಆವರಿಸಿರುವುದರಿಂದ ಎಲ್ಲ ದೇವಸ್ಥಾನಗಳಲ್ಲಿ ಮಳೆಗಾಗಿ ಪ್ರಾರ್ಥಿಸಲಾಯಿತು. ಗ್ರಾಮೀಣ ಭಾಗದಲ್ಲೂ ಸಹ ಸಂಭ್ರಮ ಕಳೆಗಟ್ಟಿತ್ತು.
ವೆಂಕಟೇಶ್ವರಸ್ವಾಮಿ ಬ್ರಹ್ಮರಥೋತ್ಸವ
ದಸರಾ ಪ್ರಯುಕ್ತ ಚಿತ್ರದುರ್ಗದ ತುರುವನೂರು ರಸ್ತೆಯ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ವೆಂಕಟೇಶ್ವರಸ್ವಾಮಿ ಬ್ರಹ್ಮರಥೋತ್ಸವ ವೈಭವದಿಂದ ನೆರವೇರಿತು. ಸಂಪ್ರದಾಯದಂತೆ ಗರುಡ ವಾಹನದ ಮೇಲೆ ಸ್ವಾಮಿಯನ್ನು ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರಿಂದ ಹರ್ಷೋದ್ಘಾರ ಮೊಳಗಿದವು. ನಂತರ ಕೆಲ ಭಕ್ತರು ಸ್ವಾಮಿಯ ಹೂವಿನ ಹಾರಗಳನ್ನು ಹರಾಜಿನಲ್ಲಿ ಖರೀದಿಸಿದರು. ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಅಂಬು ಕತ್ತರಿಸಿ ಅಂಬಿನೋತ್ಸವ ನೆರವೇರಿಸಲಾಯಿತು. ದೇವಸ್ಥಾನದ ಆವರಣದಲ್ಲಿ ನೆರೆದಿದ್ದ ಭಕ್ತರು ಬನ್ನಿ ಮುಡಿಯುವ ಮೂಲಕ ಪರಸ್ಪರ ಹಬ್ಬದ ಸಂಭ್ರಮ ಹಂಚಿಕೊಂಡರು. ಶರನ್ನವರಾತ್ರಿ ಪ್ರಯುಕ್ತ ವೆಂಕಟರಮಣ ಸ್ವಾಮಿಗೆ ನಿತ್ಯ ವಿಶೇಷ ಪೂಜೆಗಳು ನೆರವೇರಿದ್ದು ಮಂಗಳವಾರ ಬೆಳಿಗ್ಗೆ ಧ್ವಜಾರೋಹಣ ಓಕುಳಿ ಉಯ್ಯಾಲೆ ಉತ್ಸವ ಜರುಗಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.