ಧರ್ಮಪುರ: ಸ್ಥಳೀಯ ಅಭ್ಯರ್ಥಿ ಜೆಜೆ ಹಟ್ಟಿ ತಿಪ್ಪೇಸ್ವಾಮಿ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ ತಿಪ್ಪೇಸ್ವಾಮಿ ಅಭಿಮಾನಿ ಬಳಗದವರು ಭಾನುವಾರ ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ತಿಪ್ಪೇಸ್ವಾಮಿ ಜಾತ್ಯತೀತ ನಾಯಕರಾಗಿದ್ದು, ಕಾಂಗ್ರೆಸ್ ಪಕ್ಷವನ್ನು ಗ್ರಾಮೀಣ ಹಂತದಿಂದಲೂ ಸಂಘಟಿಸಿದ್ದಾರೆ. ಜಿಲ್ಲೆಯ ಜನರ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಲು ತಯಾರಿ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಹೊರಗಿನವರಿಗೆ ಟಿಕೆಟ್ ಕೊಟ್ಟಿದ್ದು ಸಾಕು. ತಿಪ್ಪೇಸ್ವಾಮಿ ಅವರಿಗೆ ಅನೇಕ ಸರ್ಕಾರಿ ಹುದ್ದೆಗಳು ಸಿಕ್ಕಿದ್ದರೂ ರಾಜಿನಾಮೆ ನೀಡಿ ಸಾಮಾಜಿಕ ಸೇವೆ ಸಲ್ಲಿಸಲು ಕಂಕಣ ಬದ್ಧರಾಗಿದ್ದಾರೆ. ಅಂತವರಿಗೆ ಕಾಂಗ್ರೆಸ್ ಹೈಕಮಾಂಡ್ ಗುರುತಿಸಿ ಟಿಕೆಟ್ ನೀಡಬೇಕು ಎಂದು ಶ್ರವಣಗೆರೆ ರವಿಶಂಕರ್ ಒತ್ತಾಯಿಸಿದ್ದಾರೆ.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾದಿಗ ಯುವಸೇನೆ ಹೋಬಳಿ ಘಟಕದ ಅಧ್ಯಕ್ಷ ಇ.ಶಿವಕುಮಾರ್ ಮಾತನಾಡಿ, ‘ಹೊರಗಿನವರು ಗೆದ್ದ ನಂತರ ಕ್ಷೇತ್ರಕ್ಕೆ ಬಾರದೇ ಅಭಿವೃದ್ಧಿ ಮರೀಚಿಕೆಯಾಗುತ್ತದೆ. ಅದಕ್ಕಾಗಿ ಸ್ಥಳೀಯ ಅಭ್ಯರ್ಥಿ ಮಾದಿಗ ಜನಾಂಗದ ತಿಪ್ಪೇಸ್ವಾಮಿ ಅವರಿಗೆ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಂಗಸ್ವಾಮಿ, ರಾಮಕೃಷ್ಣ, ಸಂತೋಷ್, ಬಾಬು, ಮುರುಳಿ, ಶಿವಲಿಂಗಪ್ಪ, ತಿಪ್ಪೇಸ್ವಾಮಿ, ಶಿವು, ಅಮೀರ್, ರಂಗನಾಥ, ನಾಗರಾಜ್, ಅಕ್ಬರ್, ಹಳ್ಳಪ್ಪ, ಜಮೀರ್, ಅಮೀರ್ ಬಾಷಾ, ಗಿರೀಶ್, ದೇವರಾಜ, ಬೂತರಾಯ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.