ಧರ್ಮಪುರ: ಹೋಬಳಿಯಲ್ಲಿ ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ಹಲವೆಡೆ ಬೆಳೆ ನಷ್ಟವಾಗಿದೆ.
ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮಳೆಯಾಗಿರುವ ಹೋಬಳಿಯ ಇಕ್ಕನೂರು, ಕೋಡಿಹಳ್ಳಿ, ಕುಂದಲಗುರ,
ಮ್ಯಾದನಹೊಳೆ, ಕುರುಬರಹಳ್ಳಿ, ಈಶ್ವರಗೆರೆ, ಉಪ್ಪಳಿಗೆರೆ, ಹೂವಿನಹೊಳೆ ಭಾಗಗಳಲ್ಲಿ ನೀರಾವರಿ ಜಮೀನಿನಲ್ಲಿ ನೀರು ನಿಂತಿದ್ದು, ಬೆಳೆ ಸಂಪೂರ್ಣ ಹಾನಿಯಾಗಿದೆ.
ಎರಡು ದಿನಗಳಿಂದ ಕಂದಾಯ ಇಲಾಖೆಯ ಅಧಿಕಾರಿಗಳು ಹೋಬಳಿಯ ಪ್ರತಿಯೊಂದು ಗ್ರಾಮಗಳಿಗೆ ಭೇಟಿ ನೀಡಿ ಮಳೆ ಹಾನಿ ಸಮೀಕ್ಷೆ ನಡೆಸಿದರು.
ಇಕ್ಕನೂರು ಗ್ರಾಮದಲ್ಲಿ 4 ಮನೆಗಳು, ರಂಗೇನಹಳ್ಳಿಯಲ್ಲಿ 3 ಮನೆ, ಹಲಗಲದ್ದಿಯಲ್ಲಿ 1 ಮನೆ ಬಿದ್ದಿದೆ. ಹೋಬಳಿಯಲ್ಲಿ 100 ಎಕರೆಯ ಟೊಮೊಟೊ, 100 ಎಕರೆಯಲ್ಲಿನ ಹತ್ತಿ, 80 ಎಕರೆಯಲ್ಲಿ ಶೇಂಗಾ, 20 ಎಕರೆ ಮೆಕ್ಕೆಜೋಳ,50 ಎಕರೆ ಸೂರ್ಯಕಾಂತಿ, 5 ಎಕರೆ ಸೋಯಾಬಿನ್, 40 ಎಕರೆ ಪಪ್ಪಾಯಿ, ದಾಳಿಂಬೆ ಬೆಳೆ ಸಂಪೂರ್ಣವಾಗಿ ಜಲಾವೃತವಾಗಿದ್ದು, ಅಪಾರ ನಷ್ಟ ಸಂಭವಿಸಿದೆ ಎಂದು ಕಂದಾಯ ಅಧಿಕಾರಿ ವರದರಾಜು ತಿಳಿಸಿದ್ದಾರೆ.
ವರುಣನಆರ್ಭಟಕ್ಕೆ ತುತ್ತಾಗಿ ಮೂರು ದಿನಗಳಲ್ಲಿ ಸುರಿದ ಮಳೆಯಿಂದ ಬೆಳೆ ಕೊಳೆತು ಹೋಗಿ ಅಪಾರ ನಷ್ಟ ಸಂಭವಿಸಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಕೊಡಿಸಬೇಕು ಎಂದು ರೈತ ಜಗದೀಶ್ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.