ಧರ್ಮಪುರ: ಬೇಸಿಗೆ ಅವಧಿಯಲ್ಲಿ ಬೆಲೆ ಏರಿಕೆಯಾಗುತ್ತದೆ ಎಂಬ ನಿರೀಕ್ಷೆಯೊಂದಿಗೆ ಟೊಮೆಟೊ ಬೆಳೆದಿದ್ದ ಹಿರಿಯೂರು ತಾಲ್ಲೂಕಿನ ರೈತರು ಕೈಸುಟ್ಟುಕೊಂಡಿದ್ದಾರೆ. ಟೊಮೆಟೊ ಬೆಲೆ ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡಿದ್ದು ಅಪಾರ ನಷ್ಟ ಅನುಭವಿಸಿದ್ದಾರೆ.
ಹಿರಿಯೂರು ತಾಲ್ಲೂಕು ವ್ಯಾಪ್ತಿಯಲ್ಲಿ ರೈತರು 650 ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಟೊಮೆಟೊ ಬೆಳೆದಿದ್ದಾರೆ. ಬೆಲೆ ಕುಸಿದಿರುವ ಕಾರಣ ಟೊಮೆಟೊ ಕೊಯ್ಲು ಮಾಡದೆ ಹೊಲದಲ್ಲಿಯೇ ಬಿಟ್ಟಿದ್ದಾರೆ. ಹಲವು ರೈತರು ಟೊಮೆಟೊ ಬೆಳೆಗೆ ಆಡು, ಕುರಿ, ದನಕರು ಬಿಟ್ಟು ಮೇಯಿಸುತ್ತಿದ್ದಾರೆ. ಕೋವಿಡ್ ಅವಧಿಯಲ್ಲಿ, ಕಳೆದ ಬೇಸಿಗೆ ಅವಧಿಯಲ್ಲಿ ಟೊಮೆಟೊ ಸೇಬಿಗಿಂತಲೂ ದುಬಾರಿಯಾಗಿತ್ತು. ಆದರೆ ಈಗ ಟೊಮೆಟೊ ಕೇಳುವವರೇ ಇಲ್ಲವಾಗಿದ್ದಾರೆ.
ಧರ್ಮಪುರ ಹೋಬಳಿ ವ್ಯಾಪ್ತಿಯಲ್ಲಿ 350 ಹೆಕ್ಟೇರ್ ಪ್ರದೇಶದಲ್ಲಿ ರೈತರು ಟೊಮೆಟೊ ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಕಾರಣ ಬೆಳೆದ ಟೊಮೆಟೊ ಫಸಲು, ಕುರಿ–ಮೇಕೆಗೆ ಮೇವಾಗಿ ಪರಿಣಮಿಸಿದೆ. ಒಂದು ಕ್ರೇಟ್ ಟೊಮೆಟೊ ಹಣ್ಣು ಮಾರುಕಟ್ಟೆಯಲ್ಲಿ ₹50ಕ್ಕೆ ಮಾರಾಟವಾಗುತ್ತಿದ್ದು ರೈತರು ಅಪಾರ ನಷ್ಟ ಅನುಭವಿಸಿದ್ದಾರೆ.
ಟೊಮೆಟೊ ಕೊಯ್ಲು ಮಾಡಿಸಿ ಮಾರುಕಟ್ಟೆಗೆ ಸಾಗಿಸಿದ ಹಣವೂ ಬಾರದ ಕಾರಣ ರೈತರು ಟೊಮೆಟೊ ಕೊಯ್ಲು ಸ್ಥಗಿತಗೊಳಿಸಿದ್ದಾರೆ. ಹಾಕಿದ ಖರ್ಚು ಕೂಡ ರೈತರಿಗೆ ಸಿಗುತ್ತಿಲ್ಲ. ಕೆ.ಜಿ ₹ 2ರಿಂದ ₹3ಕ್ಕೆ ಮಾರಾಟವಾಗುತ್ತಿದ್ದು ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ದರ ₹ 15 ಇದ್ದರೂ ಅದರ ಲಾಭ ರೈತರಿಗೆ ದೊರೆಯದಾಗಿದೆ.
‘ಎರಡು ಎಕರೆಯಲ್ಲಿ ₹ 14,000 ಟೊಮೆಟೊ ಸಸಿ ನಾಟಿ ಮಾಡಿದ್ದೆ. ಹನಿ ನೀರಾವರಿ, ಬದು, ಗೂಟ, ದಾರ ಮತ್ತಿತರ ಪರಿಕರ ಅಳವಡಿಕೆಗೆ ₹1 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದೆ. ಮಾರುಕಟ್ಟೆಯ ದರ ಕುಸಿತದಿಂದ ಈಗ ಹಣ್ಣು ಕೀಳದೆ ಕುರಿ ಮೇಯಿಸಲು ಬಿಟ್ಟಿದ್ದೇನೆ’ ಎಂದು ಧರ್ಮಪುರದ ರೈತ ಎಂ.ಮೂಡಲಗಿರಿಯಪ್ಪ ಬೇಸರದಿಂದ ಹೇಳಿದರು.
‘ಹಣ್ಣು ಕೀಳಲು ಒಬ್ಬರಿಗೆ ದಿನಕ್ಕೆ ₹ 350 ಕೂಲಿ ಕೊಡಬೇಕು. ಹಣ್ಣು ಕಿತ್ತು ಕೋಲಾರ ಮಾರುಕಟ್ಟೆಗೆ ಸಾಗಿಸಲು ಒಂದು ಕ್ರೇಟ್ ₹45 ಸಾರಿಗೆ ವೆಚ್ಚ ಭರಿಸಬೇಕು. ಮಾರುಕಟ್ಟೆಯಲ್ಲಿ ಕಮೀಷನ್ ಬೇರೆ ಕೊಡಬೇಕು. ಇಷ್ಟೆಲ್ಲಾ ಖರ್ಚು ಮಾಡಿ ಮಾರುಕಟ್ಟೆಗೆ ಸಾಗಿಸಿದರೆ ಖರ್ಚು ಹಲವು ಪಟ್ಟು ಹೆಚ್ಚಾಗುತ್ತದೆ. ಕೊಯ್ಲು ಮಾಡುವ ಬದಲು ಆಡುಕುರಿಗೆ ಮೇವಾದರೂ ಆಗಲಿ ಎಂದು ಮೇಯಿಸುತ್ತಿದ್ದೇವೆ’ ಎಂದು ರೈತ ಎಂ.ಬಸವರಾಜು ಹೇಳಿದರು.
ಲಾಭ ತಾರದ ಬೇಸಿಗೆ: ಬೇಸಿಗೆ ಅವಧಿಯಲ್ಲಿ ತರಕಾರಿಗೆ ಉತ್ತಮ ಬೆಲೆ ಸಿಗಬಹುದು ಎಂಬ ನಿರೀಕ್ಷೆ ರೈತರಲ್ಲಿತ್ತು. ಕಳೆದ ಬಾರಿ ಉತ್ತಮ ಮಳೆಯೂ ಸುರಿದ ಕಾರಣ ಉತ್ತಮ ಬೆಳೆಯೂ ಬಂದಿತ್ತು. ಜೊತೆಗೆ ಈ ವರ್ಷ ವಾಣಿ ವಿಲಾಸ ಸಾಗರದಿಂದ ವೇದಾವತಿ ನದಿಗೆ ನೀರು ಬಿಟ್ಟಿದ್ದು ನೀರಿನ ಕೊರತೆ ಎದುರಾಗಲಿಲ್ಲ.
ಧರ್ಮಪುರ ಹೋಬಳಿಯ ಈಶ್ವರಗೆರೆ, ಮುಂಗುಸುವಳ್ಳಿ, ಸೂಗೂರು, ಅಬ್ಬಿನಹೊಳೆ, ಶ್ರವಣಗೆರೆ, ಗೂಳ್ಯ, ಅಜ್ಜಿಕಟ್ಟೆ, ಧರ್ಮಪುರ ಎಂಟು ಕೆರೆಗಳಿಗೆ ಪ್ರಯೋಗಾರ್ಥವಾಗಿ ಏತ ನೀರಾವರಿ ಯೋಜನೆಯ ಮೂಲಕ ಕೆರೆಗಳಿಗೆ ನೀರುಣಿಸಿದ್ದರಿಂದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಿ ರೈತರು ತರಕಾರಿ ಬೆಳೆಗೆ ಒತ್ತು ನೀಡಿದ್ದರು. ಬಹುತೇಕ ರೈತರು ಟೊಮೆಟೊವನ್ನೇ ಬೆಳೆದ ಕಾರಣ ದರ ಕುಸಿತಕ್ಕೆ ಸಿಲುಕುವಂತಾಗಿದೆ.
‘ರೈತರು ಬೆಳೆದ ಹಣ್ಣು, ತರಕಾರಿ ಬೇಸಿಗೆಯಲ್ಲಿ ಬಹು ಬೇಗ ಹಾಳಾಗುವ ಸಾಧ್ಯತೆ ಹೆಚ್ಚು. ಅದಕ್ಕಾಗಿ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿ ಮಾಡಬೇಕು. ಹಣ್ಣು, ತರಕಾರಿ ಸಂರಕ್ಷಿಸಲು ಶೀಥಲೀಕರಣ ಘಟಕ ಸ್ಥಾಪಿಸಬೇಕು. ಬೆಲೆ ಕುಸಿತದ ವೇಳೆ ಸರ್ಕಾರ ರೈತರ ಪರ ನಿಲ್ಲಬೇಕು’ ರೈತ ಹೊರಕೇರಪ್ಪ ಒತ್ತಾಯಿಸಿದರು.
ರೈತರು ಹೆಚ್ಚಾಗಿ ಒಂದೇ ಬೆಳೆ ಬೆಳೆಯುವುದನ್ನು ಬಿಡಬೇಕು. ಒಂದೇ ಬೆಳೆ ಬೆಳೆದರೆ ದರ ಕುಸಿತವಾಗುತ್ತದೆ. ಆದಷ್ಟು ಮಿಶ್ರ ಬೆಳೆ ಪದ್ಧತಿಯನ್ನು ಅನುಸರಿಸಬೇಕುಲೋಕೇಶ್ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.