ಚಿತ್ರದುರ್ಗ: ಹೊಳಲ್ಕೆರೆ ಹಾಗೂ ಚಿತ್ರದುರ್ಗ ತಾಲ್ಲೂಕಿನ ಗಣಿಬಾದಿತ ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ವಿವಿಧ ಗ್ರಾಮಗಳ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಕೆರೆಯ ಹೂಳು ತೆಗೆಸುವುದು, ಬದು ಭದ್ರ ಪಡಿಸುವುದು, ಕೆರೆಗಳಿಗೆ ಬರುವಂಥ ನೀರಿನ ಕಾಲುವೆಗಳ ಕಾಯಕಲ್ಪ ಮಾಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿ ಉಪವಿಭಾಗಾಧಿಕಾರಿ ಪ್ರಸನ್ನ ಅವರಿಗೆ ಮನವಿ ಸಲ್ಲಿಸಿದರು.
ಶಾಲೆಗಳಲ್ಲಿ ಹೊಸ ಕೊಠಡಿಗಳನ್ನು, ತಡೆಗೋಡೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಬೇಕು. ಗ್ರಾಮಗಳ ರಸ್ತೆ ಅಭಿವೃದ್ಧಿ ಪಡಿಸಬೇಕು. 2 ಸಾವಿರ ಮೀಟರ್ ಬಾಕ್ಸ್ ಚರಂಡಿ ನಿರ್ಮಿಸಬೇಕು. ಐ-ಮಾಸ್ಕ್ ಬೀದಿ ದೀಪಗಳನ್ನು ಅಳವಡಿಸಬೇಕು. ದೇಗುಲಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿದರು.
ಅದಿರು ಸಾಗಣೆಯಾಗುವ ರಸ್ತೆಯ ಎರಡು ಬದಿಯಲ್ಲಿ ಗ್ರಾಮದ ಅಳತೆಗೆ ಗ್ರಿಲ್ ವ್ಯವಸ್ಥೆ ಮಾಡುವ ಮೂಲಕ ಪಾದಚರಿಗಳಿಗೆ ಅನುಕೂಲ ಮಾಡಿಕೊಡಬೇಕು. ಕೊಳವೆಬಾವಿ ಹಾಗೂ ಪೈಪ್ಲೈನ್ ವ್ಯವಸ್ಥೆ ಕಲ್ಪಿಸಬೇಕು. ಉದ್ಯಾನ ವನಗಳನ್ನು ನಿರ್ಮಿಸಬೇಕು ಎಂದು ಹಿರೇಗುಂಟನೂರು, ಹಿರೇಗುಂಟನೂರು ಗೊಲ್ಲರಹಟ್ಟಿ, ಚಿಕ್ಕಗುಂಟನೂರು, ಮಾನಂಗಿ, ಸಿದ್ದಾಪುರ, ಬಿ. ದುರ್ಗ, ಸಿರಿಗೆರೆ, ಬೊಮ್ಮವ್ವ ನಾಗತಿಹಳ್ಳಿ, ಮುತ್ತುಗದೂರು, ಮೆದಕೇರಿಪುರ ಗ್ರಾಮಗಳ ಗ್ರಾಮಸ್ಥರು ಕೋರಿದರು.
ಹೆಗ್ಗೆರೆ ಶಿವಕುಮಾರ, ಚಿದಾನಂದ, ದ್ಯಾಮಪ್ಪ, ಪವನಕುಮಾರ್, ಅಮೃತ್, ರವಿಕುಮಾರ್, ರಮೇಶ್, ಪಾಲೇಶ್, ಮಂಜುನಾಥ, ನಟರಾಜ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.