ADVERTISEMENT

ಚಿತ್ರದುರ್ಗ | ನಕಲಿ ದಾಖಲೆ ಸೃಷ್ಟಿ: ಅಧೀಕ್ಷಕ ಎಂಜಿನಿಯರ್‌ ಸೇರಿ 8 ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2022, 14:49 IST
Last Updated 20 ಡಿಸೆಂಬರ್ 2022, 14:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿತ್ರದುರ್ಗ: ನಕಲಿ ದಾಖಲೆ ಸೃಷ್ಟಿಸಿ ‘ಬೆಸ್ಕಾಂ’ನಲ್ಲಿ ಅನುಕಂಪದ ಆಧಾರದಲ್ಲಿ ನೇಮಕಾತಿ ಹೊಂದಿದ ಹಗರಣವೊಂದನ್ನು ಬಯಲಿಗೆ ಎಳೆದಿರುವ ಕೋಟೆ ಠಾಣೆಯ ಪೊಲೀಸರು, ಅಧೀಕ್ಷಕ ಎಂಜಿನಿಯರ್‌ ಸೇರಿ ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರತಿ ಹುದ್ದೆಗೆ ₹ 35ರಿಂದ ₹ 40 ಲಕ್ಷ ವಸೂಲಿ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

‘ಬೆಸ್ಕಾಂ’ ದಕ್ಷಿಣ ವಲಯದ ಅಧೀಕ್ಷಕ ಎಂಜಿನಿಯರ್‌ ಎಸ್‌.ಟಿ.ಶಾಂತಮಲ್ಲಪ್ಪ, ಸಹಾಯಕ ಅಧಿಕಾರಿ ಎಲ್‌.ರವಿ, ಕಚೇರಿ ಸಹಾಯಕ ಎಚ್‌.ಸಿ.ಪ್ರೇಮಕುಮಾರ್‌, ನೌಕರಿಗೆ ಅರ್ಜಿ ಸಲ್ಲಿಸಿದ್ದ ಸಿ.ಕೆ.ಫೈಜಾನ್‌ ಮುಜಾಹಿದ್‌, ಅನುಕಂಪದ ಆಧಾರದಲ್ಲಿ ನೌಕರಿ ಪಡೆದಿದ್ದ ವಿ.ವೀರೇಶ್‌, ಸಿ.ರಘುಕಿರಣ್‌, ಹರೀಶ್‌, ಎಂ.ಆರ್.ಶಿವಪ್ರಸಾದ್‌ ಬಂಧಿತರು. ಜೆ.ರಕ್ಷಿತ್‌ ಮತ್ತು ಓ.ಕಾರ್ತಿಕ್‌ ಎಂಬುವರು ತಲೆಮರೆಸಿಕೊಂಡಿದ್ದಾರೆ.

‘ಸಿ.ಕೆ.ಫೈಜಾನ್‌ ಮುಜಾಹಿದ್‌ ಎಂಬಾತ ಅನುಕಂಪದ ಆಧಾರದ ಮೇರೆಗೆ ನೌಕರಿ ನೀಡುವಂತೆ ‘ಬೆಸ್ಕಾಂ’ಗೆ ಕೋರಿಕೆ ಸಲ್ಲಿಸಿದ್ದ. ಸಹಾಯಕ ಮಾರ್ಗದಾಳು ಆಗಿದ್ದ ಸಹೋದರ ಸಿ.ಕೆ.ಮಹಮ್ಮದ್‌ ಷೇಕ್‌ ವಿದ್ಯುತ್‌ ಅಪಘಾತದಿಂದ ಮೃತಪಟ್ಟಿರುವುದಾಗಿ ದಾಖಲೆ ಒದಗಿಸಿದ್ದ. ಅನುಕಂಪದ ಆಧಾರದ ಉದ್ಯೋಗಕ್ಕೆ ಜಿಲ್ಲೆಯಿಂದ ಹೆಚ್ಚು ಪ್ರಸ್ತಾವ ಸಲ್ಲಿಕೆಯಾಗುತ್ತಿರುವುದರಿಂದ ಅನುಮಾನಗೊಂಡ ‘ಬೆಸ್ಕಾಂ’ ಉಪ ಲೆಕ್ಕಾಧಿಕಾರಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ಮಾಹಿತಿ ನೀಡಿದ್ದಾರೆ.

‘ಸಿ.ಕೆ.ಮಹಮ್ಮದ್‌ ಷೇಕ್‌ ಎಂಬುವರು ಚಿತ್ರದುರ್ಗ ಉಪವಿಭಾಗದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡ ಬೆಸ್ಕಾಂ ಅಧಿಕಾರಿಗಳು ಮುಜಾಹಿದ್‌ ವಿರುದ್ಧ ದೂರು ದಾಖಲಿಸಿದರು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದೊಡ್ಡ ಹಗರಣವೊಂದು ಬೆಳಕಿಗೆ ಬಂದಿದೆ. ನಕಲಿ ದಾಖಲೆ ಸೃಷ್ಟಿಸಿ ಎರಡು ವರ್ಷದಲ್ಲಿ ಆರು ಜನರು ನೌಕರಿ ಪಡೆದಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ವಿವರಿಸಿದರು.

ಹುದ್ದೆಗೆ ₹ 35 ಲಕ್ಷ ನಿಗದಿ
‘ಬೆಸ್ಕಾಂ’ನಲ್ಲಿ ಕಾರ್ಯನಿರ್ವಹಿಸದೇ ಇರುವ ವ್ಯಕ್ತಿಯನ್ನು ಉದ್ಯೋಗಿಯಂತೆ ಬಿಂಬಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನೌಕರಿ ನೀಡುತ್ತಿದ್ದ ಜಾಲ ಬರೋಬ್ಬರಿ ₹ 35ರಿಂದ ₹ 40 ಲಕ್ಷ ಹಣ ಪಡೆಯುತ್ತಿದ್ದ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

‘ಕಚೇರಿಯ ಸಹಾಯಕ ಅಧಿಕಾರಿ ಎಲ್‌.ರವಿ ಪ್ರಕರಣದ ಪ್ರಮುಖ ರೂವಾರಿ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅನುಕಂಪದ ಆಧಾರದ ಮೇರೆಗೆ ಉದ್ಯೋಗ ನೀಡುವಂತೆ ಯುವಕರಿಂದ ಅರ್ಜಿ ಹಾಕಿಸುತ್ತಿದ್ದ. ‘ಬೆಸ್ಕಾಂ’ ನೌಕರ ಎಚ್‌.ಸಿ.ಪ್ರೇಮ್‌ಕುಮಾರ್‌ ಈ ಪ್ರಸ್ತಾವ ಅನುಮೋದನೆಯಾಗುವಂತೆ ನೋಡಿಕೊಳ್ಳುತ್ತಿದ್ದ. ಅಧೀಕ್ಷಕ ಎಂಜಿನಿಯರ್‌ ಶಾಂತಮಲ್ಲಪ್ಪ ನೇಮಕಾತಿ ಆದೇಶ ನೀಡುತ್ತಿದ್ದ. ಕಿರಿಯ ಎಂಜಿನಿಯರ್ ಸೇರಿ ಹಲವು ಹುದ್ದೆಗಳಿಗೆ ಇದೇ ರೀತಿ ನೇಮಕಾತಿ ಮಾಡಿಕೊಂಡಿದ್ದರು’ ಎಂದು ಎಸ್‌ಪಿ ಪರಶುರಾಮ್‌ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT