ADVERTISEMENT

ನಾಟಕೋತ್ಸವ: ಅರ್ಥಪೂರ್ಣ ಆಚರಣೆಗೆ ತೀರ್ಮಾನ

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಭೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 2:43 IST
Last Updated 2 ಅಕ್ಟೋಬರ್ 2021, 2:43 IST
ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯ ರಾಷ್ಟ್ರೀಯ ನಾಟಕೋತ್ಸವ ಆಚರಣೆ ಸಂಬಂಧ ನಡೆದ ಸಭೆಯಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು
ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯ ರಾಷ್ಟ್ರೀಯ ನಾಟಕೋತ್ಸವ ಆಚರಣೆ ಸಂಬಂಧ ನಡೆದ ಸಭೆಯಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು   

ಸಾಣೇಹಳ್ಳಿ (ಹೊಸದುರ್ಗ): ಪ್ರತಿ ವರ್ಷದಂತೆ ಈ ಬಾರಿಯೂ ರಾಷ್ಟ್ರೀಯ ನಾಟಕೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಗುರುವಾರ ಸಾಣೇಹಳ್ಳಿ ಬಸವ ಮಹಾಮನೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ಬಾರಿ ಶಿವಸಂಚಾರಕ್ಕೆ 25, ಶಿವಕುಮಾರಶ್ರೀ ಕಲಾಸಂಘಕ್ಕೆ 35, ರಂಗಶಾಲೆಗೆ 15 ಹಾಗೂ ತರಳಬಾಳು ಬೃಹನ್ಮಠದ ಶಾಖಾ ಮಠಕ್ಕೆ ಪೀಠಾಧ್ಯಕ್ಷರಾಗಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ 45 ವರ್ಷ ತುಂಬಲಿದೆ. ಜತೆಗೆ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದದಿಂದ ಸುಸೂತ್ರವಾಗಿ ಮಠ ಮುನ್ನಡೆಯುತ್ತಿರುವ ಕಾರಣ ಸಮಾಜಕ್ಕೆ ಪ್ರೇರಣೆ ಆಗುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾದವು.

‘ಮಠದ ಅಭಿವೃದ್ಧಿ ವಿಚಾರದಲ್ಲಿ ಶಿವಕುಮಾರ ಶ್ರೀ ಕೊಡುಗೆ ಅಪಾರ. ದುಗ್ಗಾಣಿ ಮಠವನ್ನು ದುಡಿಯುವ ಮಠವಾಗಿಸಿದರು. ಧಾರ್ಮಿಕ, ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿಕ, ರಾಜಕೀಯ, ಶೈಕ್ಷಣಿಕವಾಗಿ ಭದ್ರ ಬುನಾದಿ ಹಾಕಿದರು. ಅವರು ಯಾರನ್ನೂ ನಗಣ್ಯ ಎಂದು ಭಾವಿಸಿದವರಲ್ಲ. ಸಾಮಾನ್ಯನಿಂದ ಅಸಾಮಾನ್ಯರವರೆಗೆ ಎಲ್ಲರಿಗೂ ಸಮಾನ ಅವಕಾಶ, ಗೌರವ ನೀಡುತ್ತಿದ್ದರು’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸ್ಮರಿಸಿಕೊಂಡರು.

ADVERTISEMENT

‘ಸಿರಿಗೆರೆಯಿಂದ ದೆಹಲಿಯವರೆಗೆ ಶರಣರಿಗೆ ಸಂಬಂಧಿಸಿದ ನಾಟಕಗಳನ್ನು ಆಡಿಸಿದರು. ಅವರ ಪ್ರೇರಣೆಯಿಂದಾಗಿಯೇ 1987ರಲ್ಲಿ ಇಲ್ಲಿ ಶಿವಕುಮಾರ ಕಲಾಸಂಘ ಆರಂಭಿಸಿದೆವು. ರಂಗಕರ್ಮಿ ಸಿಜಿಕೆ ಅವರ ಸಂಪರ್ಕದಿಂದ ‘ಶಿವಸಂಚಾರ’ 1997ರಲ್ಲಿ ಆರಂಭವಾಯಿತು. 150 ಪ್ರದರ್ಶನ ನೀಡಲಾಗಿದೆ. 2008ರಲ್ಲಿ ರಂಗಶಾಲೆ ಆರಂಭವಾಯಿತು. ಇವೆಲ್ಲವೂ ರಂಗಭೂಮಿಗೆ ಹೊಸ ಚೈತನ್ಯ ತಂದುಕೊಟ್ಟಿವೆ’ ಎಂದರು.

‘ರಂಗಭೂಮಿ ಅನೇಕ ಪ್ರತಿಭಾವಂತರನ್ನು, ಚಿಂತಕರನ್ನು, ಸಾಹಿತಿಗಳನ್ನು, ಸಾಮಾಜಿಕ ಕಾರ್ಯಕರ್ತರನ್ನು ಪರಿಚಯಿಸಿದೆ. ಜನರ ಮೇಲೆ ಅದ್ಭುತ ಪರಿಣಾಮ ಬೀರಿದೆ. ಎಲ್ಲರ ಸಹಕಾರದಿಂದ ಮುನ್ನಡೆಯುತ್ತಿದೆ. ಶಿವಸಂಚಾರದ 25 ವರ್ಷಗಳ ನೆನಪಿಗಾಗಿ ಸುಸಜ್ಜಿತ ರೆಕಾರ್ಡಿಂಗ್ ಸ್ಟುಡಿಯೊ ಸಿದ್ದಗೊಳ್ಳುತ್ತಿದೆ’ ಎಂದು ಮಾಹಿತಿ ನೀಡಿದರು.

ಖನಿಜ ಮತ್ತು ಗಣಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಲಿಂಗಮೂರ್ತಿ, ಶಿವಮೊಗ್ಗದ ಅಡಿಕೆ ವ್ಯಾಪಾರಿ ಎಚ್. ಓಂಕಾರಪ್ಪ, ಹೊಸದುರ್ಗ ಪುರಸಭೆ ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಜಾನಕಲ್ ಶಂಕರಮೂರ್ತಿ, ಬನಸಿಹಳ್ಳಿ ಅಜ್ಜಪ್ಪ, ಆನಂದಪ್ಪ, ಎ.ಸಿ. ಚಂದ್ರಪ್ಪ, ಗಂಗಾಧರಪ್ಪ, ಹೆಬ್ಬಳ್ಳಿ ಮಲ್ಲಿಕಾರ್ಜುನ್, ಭದ್ರಾವತಿ ಸಾಧು ವೀರಶೈವ ಸಮಾಜದ ಅಧ್ಯಕ್ಷೆ ಯಶೋಧಮ್ಮ, ಕಲಾವಿದ ಕೃಷ್ಣಮೂರ್ತಿ, ಹೊಳಲ್ಕೆರೆ ಮಾಜಿ ಶಾಸಕ ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.