ADVERTISEMENT

ಸಿಗದ ಬೆಲೆ, ಬಾಳೆ ಗಿಡ ಕಡಿದ ರೈತ

ಆಗಿದ್ದು 1.5 ಲಕ್ಷ ವೆಚ್ಚ, ಅಲ್ಪಮಾರಾಟದಿಂದ ಸಿಕ್ಕಿದ್ದು ₹ 20 ಸಾವಿರ ಆದಾಯ

ಜೆ.ತಿಮ್ಮಪ್ಪ ಚಿಕ್ಕಜಾಜೂರು
Published 23 ಏಪ್ರಿಲ್ 2020, 20:30 IST
Last Updated 23 ಏಪ್ರಿಲ್ 2020, 20:30 IST
ಹಿರೇಎಮ್ಮಿಗನೂರು ಗ್ರಾಮದ ರೈತ ಷಣ್ಮುಖಪ್ಪ ತೋಟದಲ್ಲಿ ನೆಲಕ್ಕುರುಳಿದ ಬಾಳೆಗೊನೆಗಳನ್ನು ತೋರಿಸಿದರು
ಹಿರೇಎಮ್ಮಿಗನೂರು ಗ್ರಾಮದ ರೈತ ಷಣ್ಮುಖಪ್ಪ ತೋಟದಲ್ಲಿ ನೆಲಕ್ಕುರುಳಿದ ಬಾಳೆಗೊನೆಗಳನ್ನು ತೋರಿಸಿದರು   

ಚಿಕ್ಕಜಾಜೂರು (ಚಿತ್ರದುರ್ಗ): ಲಾಕ್‌ಡೌನ್‌ನಿಂದಾಗಿ ಬಾಳೆಬೆಳೆಗೆ ಬೇಡಿಕೆ ಇರಲಿಲ್ಲ. ಖರೀದಿದಾರರೂ ಸ್ಪಂದಿಸಲಿಲ್ಲ. ಇದರಿಂದ ಬೇಸತ್ತ ರೈತರೊಬ್ಬರು ಕೊಯ್ಲಿಗೆ ಬಂದಿದ್ದ ಬಾಳೆಗಿಡಗಳನ್ನೇ ಕತ್ತರಿಸಿಹಾಕಿದ್ದಾರೆ.

ಸಮೀಪದ ಹಿರೇಎಮ್ಮಿಗನೂರು ಗ್ರಾಮದ ರೈತ ಎಂ.ಕೆ. ಷಣ್ಮುಖಪ್ಪ ಎರಡು ಎಕರೆ ಪ್ರದೇಶದಲ್ಲಿ ಅಡಿಕೆ ತೋಟದಲ್ಲಿ ಅಂತರ‌ ಬೆಳೆಯಾಗಿ 1000 ಬಾಳೆ ಸಸಿಗಳನ್ನು ನಾಟಿ ಮಾಡಿದ್ದರು.

‘ಗುಣಿ, ಗೊಬ್ಬರ, ಬಾಳೆ ಸಸಿಗಳ ವೆಚ್ಚ, ಕೂಲಿ ಸೇರಿ ಸುಮಾರು ₹ 1.50 ಲಕ್ಷ ಖರ್ಚು ಮಾಡಿದ್ದೆ. ಸಸಿಗಳು ಹುಲುಸಾಗಿ ಬೆಳೆದಿದ್ದವು. ಗೊನೆಗಳೂ ಚೆನ್ನಾಗಿ ಬಂದಿದ್ದವು. ಬೆಳೆ ಕೈ ಸೇರಿದ್ದರೆ ₹ 3.50 ಲಕ್ಷದಿಂದ ₹ 4 ಲಕ್ಷ ಲಾಭವಾಗುವ ನಿರೀಕ್ಷೆ ಇತ್ತು’ ಎನ್ನುತ್ತಾರೆ ರೈತ ಎಂ.ಕೆ.ಷಣ್ಮುಖಪ್ಪ.

ADVERTISEMENT

‘ಮಾರ್ಚ್‌ ತಿಂಗಳಲ್ಲಿ ಸುಮಾರು 400 ಬಾಳೆಗೊನೆಗಳನ್ನು ಕಟಾವು ಮಾಡಬೇಕಿತ್ತು. ಆಗಲೇ ಲಾಕ್‌ಡೌನ್‌ ಘೋಷಣೆ ಆಯಿತು. ಖರೀದಿಸಲು ಯಾರೂ ಮುಂದೆ ಬರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕಳೆದ ವಾರ ಬೀಸಿದ ಭಾರಿ ಗಾಳಿಗೆ ಬುಡ ಸಮೇತ ನೂರಾರು ಬಾಳೆ ಗಿಡಗಳು ನೆಲಕ್ಕುರುಳಿದವು. ಪರಿಚಯಸ್ಥರಿಗೆ ಕೆಲ ಗೊನೆಗಳನ್ನು ಕಡಿಮೆ ಬೆಲೆಗೆ ಮಾರಿದ್ದು, ಕೇವಲ ₹ 20 ಸಾವಿರ ಆದಾಯ ಬಂದಿತ್ತು. ಖರೀದಿದಾರರ ಬಳಿ ಹಲವು ಬಾರಿ ಅಲೆದಾಡಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಎಲ್ಲಾ ಗಿಡಗಳನ್ನು ಕಿತ್ತು ಹಾಕಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.