ಪ್ರಾತಿನಿಧಿಕ ಚಿತ್ರ
ಹಿರಿಯೂರು: ‘ತಾಲ್ಲೂಕಿನ ಜವನಗೊಂಡನಹಳ್ಳಿಯಿಂದ ತಾಲ್ಲೂಕು ಕಚೇರಿಗೆ ಬುಧವಾರ ಪಾದಯಾತ್ರೆಯಲ್ಲಿ ಬಂದ ರೈತರನ್ನು ತಡೆದು ಡಿವೈಎಸ್ಪಿ ಎಸ್.ಚೈತ್ರಾ ಅವರು ಅನುಚಿತವಾಗಿ ವರ್ತಿಸಿದ್ದಾರೆ. ಹೋರಾಟಗಾರರಿಗೆ ಗೌರವ ನೀಡದೇ ಏರುಧ್ವನಿಯಲ್ಲಿ ಬೆದರಿಸುವಂತೆ ಮಾತನಾಡಿದ್ದಾರೆ’ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಡಿವೈಎಸ್ಪಿ ವಿರುದ್ಧ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲು ಮುಖಂಡರು ನಿರ್ಧರಿಸಿದ್ದಾರೆ.
‘ಕೆರೆಗಳಿಗೆ ನೀರು ಹರಿಸುವಂತೆ ರೈತ ಸಂಘದ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದೆವು. ಪಾದಯಾತ್ರೆ ತಾಲ್ಲೂಕು ಕಚೇರಿ ಸಮೀಪ ಬಂದಾಗ ಪ್ರತಿಭಟನಕಾರರಿಗೆ ಕಚೇರಿ ಆವರಣದ ಒಳಗೆ ಬಿಡುವುದಿಲ್ಲ ಎಂದು ಡಿವೈಎಸ್ಪಿ ತಡೆದರು. ರೈತ ಸಂಘದ ಹಿರಿಯ ಮುಖಂಡರಾದ ಎಚ್.ಆರ್. ಬಸವರಾಜಪ್ಪ, ಈಚಘಟ್ಟದ ಸಿದ್ದವೀರಪ್ಪ ಮೊದಲಾದವರು ಪ್ರತಿಭಟನೆ ಉದ್ದೇಶದ ಬಗ್ಗೆ ವಿವರಿಸುವ ಪ್ರಯತ್ನ ನಡೆಸಿದರೂ ಅಧಿಕಾರಿ ಕೇಳಿಸಿಕೊಳ್ಳದೆ ಏರು ದನಿಯಲ್ಲಿ ಮುಖಂಡರ ವಿರುದ್ಧ ಕಿಡಿಕಾರಿದ್ದು ಏಕೆ’ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಪ್ರಶ್ನಿಸಿದ್ದಾರೆ.
‘ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರಸ್ವಾಮಿ ಸ್ಥಳಕ್ಕೆ ಬಂದು ಪರಿಸ್ಥಿತಿತಿಳಿಗೊಳಿಸಿ ರೈತ ಮುಖಂಡರನ್ನು ತಾಲ್ಲೂಕು ಕಚೇರಿ ಆವರಣಕ್ಕೆ ಹೋಗಲು ಅನುವು ಮಾಡಿಕೊಟ್ಟ. ಪಾದಯಾತ್ರೆಯಲ್ಲಿ ಸಾವಿರಾರು ರೈತರು ಪಾಲ್ಗೊಂಡಿದ್ದರೂ ಒಂದೇ ಒಂದು ಸಣ್ಣ ಗಲಭೆಗೂ ಅವಕಾಶ ಕೊಟ್ಟಿಲ್ಲ. ನಮ್ಮ ಹೋರಾಟ ಶಾಂತಿಯುತವಾಗಿತ್ತು. ಚೈತ್ರಾ ಅವರು ಹೋರಾಟಗಾರರನ್ನು ನಿಂದಿಸುವ ರೀತಿಯಲ್ಲಿ ಮಾತನಾಡಿದ್ದಾರೆ‘ ಎಂದು ಅವರು ಆರೋಪಿಸಿದ್ದಾರೆ.
ರೈತ ಮುಖಂಡರೊಂದಿಗೆ ಚೈತ್ರಾ ಅವರು ನಡೆಸಿರುವ ವಾಗ್ವಾದದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.