ADVERTISEMENT

ಮೊಳಕಾಲ್ಮುರು: ಕೀಟ ಕಚ್ಚಿ ವಲಯ ಅರಣ್ಯಾಧಿಕಾರಿ ಸಾವು

​ಪ್ರಜಾವಾಣಿ ವಾರ್ತೆ
Published 9 ಜೂನ್ 2023, 5:15 IST
Last Updated 9 ಜೂನ್ 2023, 5:15 IST
ಪತ್ನಿ ರಮಿತಾ, ಪುತ್ರಿ ತ್ರಿಶಾ ಜತೆ ಮೃತ ಅರಣ್ಯಾಧಿಕಾರಿ ಪ್ರಕಾಶ್.
ಪತ್ನಿ ರಮಿತಾ, ಪುತ್ರಿ ತ್ರಿಶಾ ಜತೆ ಮೃತ ಅರಣ್ಯಾಧಿಕಾರಿ ಪ್ರಕಾಶ್.   

ಮೊಳಕಾಲ್ಮುರು: ಕೀಟವೊಂದು ಕಚ್ಚಿದ್ದರಿಂದ ವಲಯ ಅರಣ್ಯಾಧಿಕಾರಿಯೊಬ್ಬರು ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ಪಟ್ಟಣದಲ್ಲಿ ನಡೆದಿದೆ. ಮೃತ ಅಧಿಕಾರಿಯನ್ನು ತಾಲ್ಲೂಕು ವಲಯ ಅರಣ್ಯಾಧಿಕಾರಿ ಪ್ರಕಾಶ್ (34) ಎಂದು ಗುರುತಿಸಲಾಗಿದೆ.

ಘಟನೆ ವಿವರ:

ಬುಧವಾರ ಸಂಜೆ ಹಿರೇಅಡವಿಗೆ ಕಾರ್ಯ ನಿಮಿತ್ತ ಹೋಗಿದ್ದಾಗ ಪ್ರಕಾಶ್ ಅವರ ಎಡಗಾಲು ಹೆಬ್ಬರಳಿಗೆ ಕೀಟವೊಂದು ಕಡಿದಿದೆ. ಮನೆಗೆ ವಾಪಸಾದ ಅವರನ್ನು ಚಿಕಿತ್ಸೆಗೆ ಕರೆದೊಯ್ಯಲು ಪತ್ನಿ ಮುಂದಾಗಿದ್ದಾರೆ. ಆದರೆ ವಿಶ್ರಾಂತಿ ಪಡೆದಲ್ಲಿ ಸರಿ ಹೋಗುತ್ತದೆ ಎಂದು ಹೇಳಿದ ಪ್ರಕಾಶ್, ಮನೆಯಲ್ಲೇ ಉಳಿದುಕೊಂಡರು. ರಾತ್ರಿ 10 ಗಂಟೆ ಸಮಯದಲ್ಲಿ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ, ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ದೌಡಾಯಿಸಿದರು. ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

2014ನೇ ಬ್ಯಾಚ್‌ನಲ್ಲಿ ಅರಣ್ಯ ಇಲಾಖೆಗೆ ಸೇರಿದ್ದ ಪ್ರಕಾಶ್, ಒಂದು ವರ್ಷದ ಹಿಂದೆ ತಾಲ್ಲೂಕಿಗೆ ವರ್ಗಾವಣೆಯಾಗಿ ಬಂದಿದ್ದರು. ಇವರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ರೆಡ್ಡಿಹಳ್ಳಿ ಗ್ರಾಮದ ಟಿ.ಬಿ. ರಮೇಶ್ ಅವರ ಪುತ್ರ. ಪತ್ನಿ ಕೆ. ರಮಿತಾ ಹಾಗೂ 3 ವರ್ಷದ ಪುತ್ರಿ ತ್ರಿಶಾ ಅವರನ್ನು ಅಗಲಿದ್ದಾರೆ. ಶವಾಗಾರದ ಎದುರು ಸಂಬಂಧಿಗಳ ರೋದನ ಮುಗಿಲು ಮುಟ್ಟಿತ್ತು. 

ಪ್ರಕಾಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.